ಕೃಷ್ಣರಾಜಪುರ: ಸ್ಥಳೀಯ ಸಿಲಿಕಾನ್ ಸಿಟಿ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಣ್ಣು ಮಕ್ಕಳ ರಕ್ಷಣೆಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿಕ್ಷಣ ತಜ್ಞ ನರಹರಿ, ‘ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಸಮಾಜವನ್ನು ತಲ್ಲಣಗೊಳಿಸುತ್ತಿದೆ. ಪರ ಸಂಸ್ಕೃತಿ ಚಾಳಿ, ಅನುಸರಿಸುವಿಕೆಯಿಂದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಪಕ್ಷ, ಜಾತಿ, ಧರ್ಮ, ಭಾಷೆ ಮರೆತು ಖಂಡಿಸಬೇಕು’ ಎಂದು ಹೇಳಿದರು.
‘ಪರಂಪರಾಗತವಾಗಿ ಬಂದಿರುವ ನಮ್ಮ ಸಂಸ್ಕೃತಿಯ ಮೇಲೆ ಪರ ಭಾಷಾ ಸಂಸ್ಕೃತಿ ಸವಾರಿ ಮಾಡುತ್ತಿದೆ. ಪರಕೀಯ ಸಂಸ್ಕೃತಿಯ ಉಡುಪುಗಳು ಸಹಾ ಪ್ರಚೋದನೆ ನೀಡುತ್ತಿವೆ. ವಿದ್ಯಾರ್ಥಿ ದೆಶೆಯಲ್ಲಿ ವಾತ್ಸಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.