ಬೆಂಗಳೂರು: ಸದಾಶಿವನಗರ ಪೊಲೀಸ್ ಠಾಣೆ ಬಳಿ ಸೋಮವಾರ ರಾತ್ರಿ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಕಡಪ ಮೂಲದ ಕರೀಂವುಲ್ಲಾ ಶೇಖ್ (33) ಎಂಬುವರು ಮೃತಪಟ್ಟು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಡಪದಲ್ಲಿ ಕ್ಯಾಬ್ ಚಾಲಕರಾಗಿರುವ ಕರೀಂ, ಸ್ನೇಹಿತರಾದ ಶಾರೂಖ್ ಖಾನ್, ಜಾವಿದ್ ಹಾಗೂ ನಯೀಮ್ ಅವರ ಜತೆ ಸೋಮವಾರ ಬೆಳಿಗ್ಗೆ ನಗರಕ್ಕೆ ಬಂದಿದ್ದರು. ಹೋಟೆಲ್ನಲ್ಲಿ ಉಳಿದುಕೊಂಡಿದ್ದ ಇವರು, ರಾತ್ರಿ 10.30ರ ಸುಮಾರಿಗೆ ಯಶವಂತಪುರದ ಗೆಳೆಯನ ಮನೆಗೆ ಹೊರಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮೇಖ್ರಿ ವೃತ್ತದ ಕಡೆಯಿಂದ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದಿರುವ ಶಾರೂಖ್, ಪೊಲೀಸ್ ಠಾಣೆ ಜಂಕ್ಷನ್ನಲ್ಲಿ ನಿಯಂತ್ರಣ ಕಳೆದುಕೊಂಡು ವಿಭಜಕ್ಕೆ ಡಿಕ್ಕಿ ಮಾಡಿದ್ದಾರೆ.
ಈ ವೇಳೆ ಚಾಲಕನ ಪಕ್ಕದ ಸೀಟಿನಲ್ಲೇ ಕುಳಿತಿದ್ದ ಕರೀಂ, ತಲೆಗೆ ಗಂಭೀರ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರನ್ನು ಜಪ್ತಿ ಮಾಡಿ, ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸದಾಶಿವನಗರ ಸಂಚಾರ ಪೊಲೀಸರು ಹೇಳಿದ್ದಾರೆ.