ಜೆಡಿಯು ಸರ್ಕಾರಕ್ಕೆ ಲಾಲು ಪ್ರಸಾದ್ ಬೇಷರತ್ ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನತಾದಳದ (ಆರ್ಜೆಡಿ) 21 ಶಾಸಕರು ವಿಶ್ವಾಸ ಮತದ ಪರ ಮತ ಹಾಕಿದರು. ಕಾಂಗ್ರೆಸ್ನ ನಾಲ್ವರು, ಇಬ್ಬರು ಪಕ್ಷೇತರ ಶಾಸಕರು ಹಾಗೂ ಸಿಪಿಐನ ಒಬ್ಬ ಶಾಸಕ ಸರ್ಕಾರದ ಬೆಂಬಲಕ್ಕೆ ನಿಂತರು. ಇದಕ್ಕೂ ಮೊದಲು ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧಪಕ್ಷದ ನಾಯಕ ನಂದಕಿಶೋರ್ ಯಾದವ್ ಹಾಗೂ ಇತರ ಸದಸ್ಯರ ಬಳಿ ತೆರಳಿದ ಮಾಂಝಿ ಹಸ್ತಲಾಘವ ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ನೈತಿಕ ಹೊಣೆ ಹೊತ್ತು ನಿತೀಶ್ಕುಮಾರ್, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಮಾಂಝಿ ಮಂಗಳವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಮೊದಲು ಅಂಚೆ ವಿಭಾಗದಲ್ಲಿ ಗುಮಾಸ್ತರಾಗಿ ಕೆಲಸ ನಿರ್ವಹಿಸಿದ್ದ ಅವರು, ದಲಿತರಲ್ಲಿಯೇ ಶೋಷಿತ ‘ಮಹಾದಲಿತ’ ಸಮುದಾಯದವರು.
‘ಬಿಜೆಪಿಯವರು ಹೇಡಿಗಳು’: ಸದನದಿಂದ ಹೊರನಡೆದ ಬಿಜೆಪಿಯ ನಡೆಯನ್ನು ‘ಪುಕ್ಕಲುತನ’ ಎಂದು ಜೆಡಿಯು ನಾಯಕ ನಿತೀಶ್ ಕುಮಾರ್ ಲೇವಡಿ ಮಾಡಿದ್ದಾರೆ. ಹೇಡಿಗಳಂತೆ ಅವರು ಸದನದಿಂದ ಬಿಜೆಪಿಯವರು ಹೊರ ನಡೆದರು ಎಂದು ಅವರು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಬಣ್ಣಿಸಿದ್ದಾರೆ. ಬಿಜೆಪಿಯವರ ಈ ನಡೆ ಪ್ರಜಾಪ್ರಭುತ್ವದಲ್ಲಿಯ ಕಪ್ಪುಚುಕ್ಕೆ. ಬಿಹಾರ ಇತಿಹಾಸಕ್ಕೆ ಮಸಿ ಬಳಿದಿದ್ದಾರೆ ಎಂದರು.
‘ಮತ್ತೆ ಒಂದಾದ ಜಾಲಿಗಿಡ, ಲಾಲು’: ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಯು, ಕಾಂಗ್ರೆಸ್ ಆರ್ಜೆಡಿ ಪಕ್ಷಗಳೂ ಜಾತ್ಯತೀತ ಶಕ್ತಿಯ ಹೆಸರಿನಲ್ಲಿ ಒಂದಾಗಿವೆ. ಇದು ಅನೈತಿಕ ಮೈತ್ರಿ ಎಂದು ವಿರೋಧಪಕ್ಷದ ನಾಯಕ ನಂದಕಿಶೋರ್ ಯಾದವ್ ಟೀಕಿಸಿದರು.