ಚೆನ್ನೈ (ಪಿಟಿಐ): ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರು ಪಕ್ಷದ ಹೈಕಮಾಂಡ್ ನೇಮಿಸಿದ್ದ ವೀಕ್ಷಕರ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋಲಲು ಜಿ. ಕೆ. ವಾಸನ್ ಅವರೇ ಕಾರಣ ಎಂಬ ಹೈಕಮಾಂಡ್ ವೀಕ್ಷಕರ ಅಭಿಪ್ರಾಯ ತಪ್ಪು ಎಂದು ಕಾರ್ತಿ ಹೇಳಿದ್ದಾರೆ.
ರಾಜ್ಯ ಮಟ್ಟದಲ್ಲಿ ಪಕ್ಷವನ್ನು ನಿರ್ವಹಿಸುವ ರೀತಿ ಬದಲಾಗಬೇಕು. ಅದಕ್ಕೆ ಕೇಂದ್ರ ವೀಕ್ಷಕರು ಹೊಸತನವನ್ನು ಮೈಗೂಡಿಸಿಕೊಳ್ಳಬೇಕು ಎಂಬರ್ಥದಲ್ಲಿ ಕಾರ್ತಿ ಮಾತನಾಡಿದ್ದಾರೆ.
ತಮಿಳುನಾಡಿನ ಕಾಂಗ್ರೆಸ್ ವೀಕ್ಷಕರಾಗಿದ್ದ ಮುಕುಲ್ ವಾಸ್ನಿಕ್ ಕಾರ್ಯವೈಖರಿಯ ಬಗ್ಗೆ ವಾಸನ್ ಮತ್ತು ಅವರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಕಾರ್ತಿ ಸಹ ಅದೇ ಧಾಟಿಯಲ್ಲಿ ಮಾತನಾಡಿರುವುದು ಬಹಳ ಮಹತ್ವ ಪಡೆದಿದೆ.