ಉಡುಪಿ: ‘ಪಾರಂಪರಿಕ ಕೃಷಿ ಪದ್ಧತಿಯಲ್ಲಿ ನಿರೀಕ್ಷಿತ ಆದಾಯ ಗಳಿಸುವುದು ಅಸಾಧ್ಯ. ಆದ್ದರಿಂದ ರೈತರು ವೈಜ್ಞಾನಿಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಅವಶ್ಯಕತೆ ಇದೆ’ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ದುಗ್ಗೇಗೌಡ ಹೇಳಿದರು.
೩೮ನೇ ಕಳತ್ತೂರು ಸಂತೆಕಟ್ಟೆಯ ಗಣೇಶ ಸಭಾಭವನದಲ್ಲಿ ಇತ್ತೀಚೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ತಾಲ್ಲೂಕಿನ ಕೊಕ್ಕರ್ಣೆ ವಲಯದ ಪ್ರಗತಿಬಂಧು ಸ್ವಸಹಾಯ ಸಂಘದ ರೈತರಿಗೆ ಏರ್ಪಡಿಸಿದ್ದ ವಲಯ ಮಟ್ಟದ ಕೃಷಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿ ಡಾ. ಧನಂಜಯ್ ಲಾಭದಾಯಕ ತರಕಾರಿ ಕೃಷಿ ಹಾಗೂ ಸಸ್ಯ ಸಂರಕ್ಷಣೆಯಲ್ಲಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಮಣ್ಣಿನ ಸಂರಕ್ಷಣೆ, ತರಕಾರಿ ಕೃಷಿಯ ಗುಣಮಟ್ಟ ಮತ್ತು ಆರೋ-ಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಸಾವಯವ ಕೃಷಿಕ ಕೃಷ್ಣ ಕುಲಾಲ್ ಆವರ್ಸೆ, ಸಮಗ್ರ ಹೈನುಗಾರಿಕಾ ನಿರ್ವಹಣೆ ಹಾಗೂ ಸ್ವ–ಉದ್ಯೋಗ ಅವಕಾಶಗಳ ಕುರಿತು ಪಶು ವೈದ್ಯಾಧಿಕಾರಿ ಡಾ. ಭಾಗ್ಯ ಮಾಹಿತಿ ನೀಡಿದರು. ಹೈನುಗಾರರಾದ ಸರಸ್ವತಿ ಶೆಡ್ತಿ ಅನುಭವ ಹಂಚಿಕೊಂಡರು.
ಕೊಕ್ಕರ್ಣೆ ವಲಯ ಅಧ್ಯಕ್ಷ ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗೋಷ್ಠಿಯ ಅಧ್ಯಕ್ಷತೆಯನ್ನು ೩೮ನೇ ಕಳತ್ತೂರು ಒಕ್ಕೂಟದ ಅಧ್ಯಕ್ಷ ರಮೇಶ್ ವಹಿಸಿದ್ದರು. ಗೋಷ್ಠಿಯ ಅಧ್ಯಕ್ಷತೆಯನ್ನು ನಾರಾಯಣ ನಾಯ್ಕ ವಹಿಸಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ತಾಲ್ಲೂಕಿನ ಕೃಷಿ ಅಧಿಕಾರಿ ನಾರಾಯಣ ಗೊಂಡ ಸ್ವಾಗತಿಸಿ, ಕೊಕ್ಕರ್ಣೆ ವಲಯ ಮೇಲ್ವಿಚಾರಕ ರಾಜ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು, ಅಧಿಕಾರಿ ಸುರೇಶ್ ಹೆಗಡೆ ವಂದಿಸಿದರು.