ಬಾರ್ಮೇರ್ (ಪಿಟಿಐ): ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧದ ವಾಗ್ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿರುವ ಬಂಡಾಯ ಎದ್ದಿರುವ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ‘ವ್ಯಕ್ತಿಯ ವೈಭವೀಕರಣ’ ಪ್ರಜಾಪ್ರಭುತ್ವ ಮತ್ತು ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ಬಾರ್ಮೇರ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ಒಂದು ದಿನದ ನಂತರ ಮಾತನಾಡಿದ ಅವರು ‘ಒಬ್ಬ ವ್ಯಕ್ತಿಯನ್ನು ಕೇಂದ್ರವಾಗಿರಿಸಿಕೊಂಡು ಎಲ್ಲವನ್ನೂ ನಡೆಸುವುದು ಸರಿಯಲ್ಲ. ಅದು ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಬಹುಶಃ ಯಾವುದೋ ಯೋಜನೆ ಅನ್ವಯ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ನನ್ನನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡುತ್ತಿದ್ದಾರೆ. ನನ್ನನ್ನು ವಂಚಿಸಲಾಗಿದೆ ಮತ್ತು ಅವಮಾನಿಸಲಾಗಿದೆ. ನನಗೆ ನಿರಾಶೆಯಾಗಿದೆ. ಆದರೆ ನಾನು ಪಕ್ಷ ತೊರೆಯುವುದಿಲ್ಲ. ಅವರು ಬೇಕಿದ್ದರೆ ಉಚ್ಚಾಟಿಸಲಿ’ ಎಂದು ಜಸ್ವಂತ್ ಹೇಳಿದ್ದಾರೆ.
ಕಾಂಗ್ರೆಸ್ನಿಂದ ಒಂದು ವಾರದ ಹಿಂದೆ ಬಿಜೆಪಿ ಸೇರಿರುವ ಸೋನಾರಾಂ ಚೌಧರಿ ಅವರಿಗೆ ಬಾರ್ಮೇರ್ ಲೋಕಸಭಾ ಕ್ಷೇತದ ಟಿಕೆಟ್ ನೀಡಿರುವ ಪಕ್ಷದ ನಿರ್ಧಾರ ವಿರೋಧಿಸಿ ಜಸ್ವಂತ್ ಬಂಡಾಯ ಎದ್ದಿದ್ದಾರೆ.
ರಾಜೆ ತಿರುಗೇಟು: ಪಕ್ಷ ಮತ್ತು ಅದರ ಅಧ್ಯಕ್ಷ ರಾಜನಾಥ್ ಸಿಂಗ್ ತೆಗೆದುಕೊಳ್ಳುವ ನಿರ್ಧಾರಗಳನ್ನು ಒಪ್ಪಿಕೊಳ್ಳುವ ಹವ್ಯಾಸವನ್ನು ನಾಯಕರು ಬೆಳೆಸಿಕೊಳ್ಳಬೇಕು ಎಂದು ಹೇಳುವ ಮೂಲಕ ಜಸ್ವಂತ್ ಅವರಿಗೆ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ ತಿರುಗೇಟು ನೀಡಿದರು.
ಬಾರ್ಮೇರ್ ಬಿಜೆಪಿ ಅಭ್ಯರ್ಥಿ ಪರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ‘ಪ್ರತಿಯೊಬ್ಬರೂ ಪಕ್ಷದ ನಿರ್ಧಾರವನ್ನು ಸ್ವೀಕರಿಸಬೇಕು ಮತ್ತು ಪಕ್ಷ ಬಿಡಬಾರದು’ ಎಂದು ಜಸ್ವಂತ್ ಹೆಸರು ಪ್ರಸ್ತಾಪಿಸದೆ ವಸುಂಧರಾ ರಾಜೆ ಹೇಳಿದರು.
ಸೋನಾರಾಂ ನಾಮಪತ್ರ
ಈ ಮಧ್ಯೆ, ಬಾರ್ಮೇರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋನಾರಾಂ ಅವರು ಮಂಗಳವಾರ ಇಲ್ಲಿ ನಾಮಪತ್ರ ಸಲ್ಲಿಸಿದರು.
ಜಿಲ್ಲಾಧಿಕಾರಿ ಭಾನು ಪ್ರಕಾಶ್ ಅವರಿಗೆ ಎರಡು ಸೆಟ್ ನಾಮಪತ್ರಗಳನ್ನು ನೀಡಿದರು.
ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಬೆಂಬಲದಿಂದಾಗಿ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಬದಲಾಗಿ ಸೋನಾರಾಂ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ತಿರುಗಿ ಬಿದ್ದಿದ್ದ ಕಾಂಗ್ರೆಸ್ನ ಮಾಜಿ ಶಾಸಕ ಸೋನಾರಾಂ ಅವರು ತಮ್ಮ ಬೆಂಬಲಿಗರೊಂದಿಗೆ ಕಳೆದ ವಾರ ಬಿಜೆಪಿ ಸೇರಿದ್ದರು.
ಸುಷ್ಮಾ–ರಾಜನಾಥ್ ಭಿನ್ನ ಹೇಳಿಕೆ
ನವದೆಹಲಿ (ಪಿಟಿಐ): ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಹೇಳಿಕೆಗೆ ವ್ಯತಿರಿಕ್ತವಾಗಿ ಮಾತನಾಡಿರುವ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಜಸ್ವಂತ್ ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸುವ ನಿರ್ಧಾರವನ್ನು ಕೇಂದ್ರ ಚುನಾವಣಾ ಸಮಿತಿಯಲ್ಲಿ ಚರ್ಚಿಸಿ ಕೈಗೊಳ್ಳಲಾಗಿದೆ. ಕೆಲವು ರಾಜಕೀಯ ಅನಿವಾರ್ಯತೆಗಳಿಂದ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ.
ಜಸ್ವಂತ್ ಅವರಿಗೆ ಟಿಕೆಟ್ ನಿರಾಕರಿಸುವ ನಿರ್ಧಾರ ಪಕ್ಷದ ಕೇಂದ್ರ ಚುನಾವಣಾ ಸಮಿತಿಯದ್ದಲ್ಲ ಎಂದು ಟಿಕೆಟ್ ನಿರಾಕರಣೆಯಾದ ನಂತರ ಸುಷ್ಮಾ ಸ್ವರಾಜ್ ಹೇಳಿದ್ದರು.
ಜಸ್ವಂತ್ ಅವರಿಗೆ ಟಿಕೆಟ್ ನೀಡಬೇಕೆಂಬುದೇ ಪ್ರತಿಯೊಬ್ಬರ ಆಕಾಂಕ್ಷೆಯಾಗಿದ್ದರೂ ಟಿಕೆಟ್ ನೀಡುವುದು ಸಾಧ್ಯವಾಗಲಿಲ್ಲ. ಇದರಿಂದ ತಾವು ಸೇರಿದಂತೆ ಪಕ್ಷದ ನಾಯಕರಿಗೆ ನೋವಾಗಿದೆ ಎಂದು ರಾಜನಾಥ್ ತಿಳಿಸಿದ್ದಾರೆ. ‘ಅಸಾಧಾರಣ ಸಂದರ್ಭಗಳಲ್ಲಿ ಅಸಾಧಾರಣ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.