ಎಂ.ಜಿ.ರಸ್ತೆಯಲ್ಲಿರುವ ಪ್ರೀಪೇಯ್ಡ್ ಆಟೊ ನಿಲ್ದಾಣದಲ್ಲಿ ಸಮಯಕ್ಕೆ ಸರಿಯಾಗಿ ಆಟೊ ದೊರೆಯದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಇದೆ. ಈ ಪ್ರೀಪೇಯ್ಡ್ ಆಟೊ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆ ‘ಎಂಗಾಡಿ’ಗೆ ವಹಿಸಿದಾಗಿನಿಂದ ಆಟೊ ಚಾಲಕರು ತಮಗೆ ಬೇಕಾದ ಸ್ಥಳಗಳಿಗೆ ಮಾತ್ರ ಬರಲು ಮುಂದಾಗುತ್ತಿದ್ದಾರೆ. ಪ್ರಯಾಣಿಕರು ಕರೆದ ಕಡೆಗೆ ಬರುವುದಿಲ್ಲ. ಇದಕ್ಕೆ ‘ಎಂಗಾಡಿ’ ಸಿಬ್ಬಂದಿಯ ಸಹಕಾರವೂ ಇದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.
ಈ ಹಿಂದೆ ಪೊಲೀಸರು ಈ ವ್ಯವಸ್ಥೆಯನ್ನು ನಿರ್ವಹಿಸುವಾಗ ಎಲ್ಲವೂ ಸರಿಯಾಗಿತ್ತು. ಈಗ ಆಟೊ ಚಾಲಕರ ಮೇಲೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಕಾನೂನಿನ ಪ್ರಕಾರ ಆಟೊ ಚಾಲಕರು ಪ್ರಯಾಣಿಕರು ಕರೆದಾಗ ಬರುವುದಿಲ್ಲ ಎಂದು ಹೇಳುವಂತಿಲ್ಲ. ಇನ್ನಾದರೂ ಸಂಬಂಧಪಟ್ಟವರು ಕ್ರಮ ಜರುಗಿಸಿ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಮನವಿ.