ಭಾರತದ ಕ್ರಿಕೆಟ್ ಆಡಳಿತದಲ್ಲಿ ಹೊಸ ಪರ್ವ ಆರಂಭವಾಗಿದೆ. ಹತ್ತು ಹಲವು ಹಗರಣ, ವಿವಾದಗಳಲ್ಲಿ ಮುಳುಗಿದ್ದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಡಳಿತದ ಕೀಲಿಕೈಯನ್ನು ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ಇಬ್ಬರು ಹಿರಿಯ ಕ್ರಿಕೆಟಿಗರ ಕೈಗೆ ನೀಡಿದೆ.
ಏಪ್ರಿಲ್ 16ರಿಂದ ನಡೆಯಲಿರುವ ಐಪಿಎಲ್ ಟೂರ್ನಿಯ ಏಳನೇ ಆವೃತ್ತಿಯ ವ್ಯವಹಾರಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಸುನಿಲ್ ಗಾವಸ್ಕರ್ ನಿರ್ವಹಿಸಲಿದ್ದಾರೆ. ಬಿಸಿಸಿಐನ ಹಿರಿಯ ಉಪಾಧ್ಯಕ್ಷ ಶಿವಲಾಲ್ ಯಾದವ್ ಅವರಿಗೆ ಮಂಡಳಿಯ ಆಡಳಿತವನ್ನು ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಇದು ಈ ಇಬ್ಬರಿಗೂ ಸಂದ ಬಲು ದೊಡ್ಡ ಗೌರವ.
ಬಿಸಿಸಿಐ ಈ ದೇಶದ ಜನಪ್ರಿಯ ಕ್ರೀಡೆಯ ಹೃದಯದಂತಿದೆ. ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಇದೂ ಒಂದು. ಇಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ಸಹಜ. ಇಂತಹ ಸಂಸ್ಥೆಯ ಆಡಳಿತ ಸಂಪೂರ್ಣ ಪಾರದರ್ಶಕವಾಗಿರಬೇಕಿತ್ತು. ಆದರೆ ಹಾಗಾಗಿಲ್ಲ. ಆದುದರಿಂದಲೇ ಮ್ಯಾಚ್ಫಿಕ್ಸಿಂಗ್ ಸೇರಿದಂತೆ ಹತ್ತು ಹಲವು ಹಗರಣಗಳ ಕಳಂಕ ಈ ಸಂಸ್ಥೆಗೆ ಅಂಟಿಕೊಂಡಿದೆ. ಆ ಕೊಳೆಯ ಬಗ್ಗೆ ದೇಶದಾದ್ಯಂತ ಕ್ರಿಕೆಟ್ ಪ್ರಿಯರಲ್ಲಿ ವಿಷಾದವಿದೆ. ಕ್ರಿಕೆಟ್ ಆಡಳಿತ ಕಳಂಕರಹಿತವಾಗಿರಲಿ ಎಂಬುದು ಈ ದೇಶದ ಕ್ರೀಡಾಸಕ್ತರ ಒಡಲಾಳದ ಆಶಯ.
ಆದರೆ ಹಗರಣಗಳ ಮಸಿಯನ್ನು ಮೈಗಂಟಿಸಿಕೊಂಡಿರುವವರೇ ಅಧಿಕಾರ ಸ್ಥಾನದಲ್ಲಿದ್ದರು. ಅವರನ್ನು ಕದಲಿಸುವುದು ಸುಲಭ ಸಾಧ್ಯವಾಗಿರಲಿಲ್ಲ. ಇಂತಹ ಸಂದಿಗ್ಧದಲ್ಲಿ ಸ್ವತಃ ಸುಪ್ರೀಂ ಕೋರ್ಟ್ ಒಂದು ಹೆಜ್ಜೆ ಮುಂದಿಟ್ಟು, ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ತಾತ್ಕಾಲಿಕವಾಗಿ ಅಧಿಕಾರದಿಂದ ದೂರ ಇರಬೇಕೆಂದು ಸೂಚಿಸಿತು. ಜತೆಗೆ, ಈ ಕ್ರೀಡೆಯಲ್ಲಿ ಜನಮನ್ನಣೆ ಇರುವ ಇಬ್ಬರು ಮಾಜಿ ಆಟಗಾರರಿಗೆ ಆಡಳಿತದ ಜವಾಬ್ದಾರಿಯನ್ನು ನೀಡಿರುವುದು ಕ್ರಿಕೆಟ್ ಆಡಳಿತದ ಶುದ್ಧೀಕರಣದ ದಿಸೆಯಲ್ಲಿ ಕೋರ್ಟ್ ತೆಗೆದುಕೊಂಡ ದಿಟ್ಟ ನಿರ್ಧಾರ.
ಅಧಿಕಾರ ವಹಿಸಿಕೊಂಡ ಕೂಡಲೇ ಗಾವಸ್ಕರ್ ಮತ್ತು ಯಾದವ್ ಉತ್ತಮ ಹೆಜ್ಜೆಗಳನ್ನಿರಿಸಿದ್ದಾರೆ. ಬಿಸಿಸಿಐನಲ್ಲಿದ್ದ ಇಂಡಿಯಾ ಸಿಮೆಂಟ್ಸ್ ಕಂಪೆನಿಯ ನೌಕರರನ್ನು ಸೇವೆಯಿಂದ ತೆಗೆದು ಹಾಕಿದ್ದಾರೆ. ಕೋರ್ಟ್ ಸೂಚನೆ ಅನ್ವಯ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇಂಡಿಯಾ ಸಿಮೆಂಟ್ಸ್ ಕಂಪೆನಿಯ ಆಡಳಿತ ನಿರ್ದೇಶಕ ಶ್ರೀನಿವಾಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರು. ಈ ತಂಡದ ‘ಮುಖ್ಯ ಅಧಿಕಾರಿ’ಯಾಗಿದ್ದ ಗುರುನಾಥ್ ಮೇಯಪ್ಪನ್ ‘ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್’ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿ.
ಇವರು ಶ್ರೀನಿವಾಸನ್ ಅಳಿಯ. ಐಪಿಎಲ್ನೊಳಗೆ ಶ್ರೀನಿವಾಸನ್ ಯಾವುದೇ ರೀತಿಯಲ್ಲಿಯೂ ಕೈಯಾಡಿಸದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ. ಹೀಗಾಗಿ ಐಪಿಎಲ್ನ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ ಇಂಡಿಯಾ ಸಿಮೆಂಟ್ಸ್ ನೌಕರ ಕೆ.ಪ್ರಸನ್ನ ಸೇರಿದಂತೆ ಹಲವರನ್ನು ಬಿಸಿಸಿಐನಿಂದ ಕಿತ್ತೊಗೆಯಲಾಗಿದೆ.
ಶುದ್ಧೀಕರಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆಶಯಕ್ಕೆ ತಕ್ಕಂತೆ ನಡೆಯುವ ನಿಟ್ಟಿನಲ್ಲಿ ‘ತಾತ್ಕಾಲಿಕ’ ಆಡಳಿತಗಾರರು ಭರವಸೆ ಮೂಡಿಸಿದ್ದಾರೆ. ಈ ನಾಡಿನ ಕ್ರಿಕೆಟ್ ಪ್ರಿಯರ ಆಶಯವೂ ಇದೇ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.