ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರು, ಬೆಳಕು ನೀಡುವ ಸೂರ್ಯಜೆನ್‌

ದೇಶದ ಅತ್ಯುತ್ತಮ ಸಂಶೋಧನಾ ಕೇಂದ್ರಗಳಲ್ಲಿ ಒಂದಾದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಏನಾದರೊಂದು ಹೊಸದು ನಡೆಯುತ್ತಲೇ ಇರುತ್ತದೆ.  ವಿಜ್ಞಾನಿಗಳ ತಂಡವೊಂದು ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಔಷಧ ಕಂಡುಹಿಡಿಯುವ ಪ್ರಯತ್ನದಲ್ಲಿದ್ದರೆ, ಮತ್ತೊಂದು ತಂಡವು ಇಂಟರ್‌ನೆಟ್‌ನಲ್ಲಿ ಓಡಾಡುವ ಮಾಹಿತಿ ಸೋರಿ ಹೋಗದಂತೆ ನೋಡಿಕೊಳ್ಳುವ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುತ್ತದೆ.

ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ‘ಸೂರ್ಯಜೆನ್’ ಎಂಬ ಸ್ಟಾರ್ಟ್ ಅಪ್. ಸೂರ್ಯಜೆನ್ ಎರಡು ವಿಶೇಷ ಮತ್ತು ಅತ್ಯವಶ್ಯ ಸಾಧನ ತಯಾರಿಸುತ್ತದೆ: ಒಂದು ಸಾಧನ ಸೌರ ಶಕ್ತಿಯನ್ನು ಉಪಯೋಗಿಸಿಕೊಂಡು ಕಲುಷಿತ ನೀರನ್ನು ಕುಡಿಯುವ ನೀರನ್ನಾಗಿ ಬದಲಾಯಿಸಿದರೆ, ಮತ್ತೊಂದು ಸಾಧನ ಉಪ್ಪು ನೀರಿನಿಂದ ಬೆಳಕನ್ನು ನೀಡುತ್ತದೆ. ಈ ಹೊಸ ಸಂಶೋಧನೆಯ ರೂವಾರಿ ಐಐಎಸ್ಸಿ ಭೌತವಿಜ್ಞಾನ ವಿಭಾಗದ ಪ್ರೊಫೆಸರ್ ವಸಂತ್ ನಟರಾಜನ್.

ಪ್ರಪಂಚದ ಪ್ರತಿ ಒಂಬತ್ತು ಜನರಲ್ಲಿ ಒಬ್ಬರಿಗೆ ಕುಡಿಯಲು ಶುದ್ಧ ನೀರು ಸಿಗುವುದಿಲ್ಲ. ಪ್ರತಿವರ್ಷ 33 ಲಕ್ಷಕ್ಕೂ ಅಧಿಕ ಮಂದಿ ಕಲುಷಿತ ನೀರಿನ ಕಾಯಿಲೆಗಳಿಂದ ಸಾಯುತ್ತಾರೆ. ವಿಶ್ವ ಬ್ಯಾಂಕ್‌ನ ಅಧ್ಯಯನದ ಪ್ರಕಾರ, 2025ರ ಹೊತ್ತಿಗೆ ಪ್ರಪಂಚದ ಎರಡನೇ ಮೂರರಷ್ಟು ಜನರಿಗೆ ಕುಡಿಯಲು ಶುದ್ಧ ನೀರು ದೊರೆಯುವುದಿಲ್ಲ.  ಹೀಗಾಗಿ, ನೀರನ್ನು ಉಳಿಸಲು, ಶುದ್ಧಗೊಳಿಸಲು ಮತ್ತು   ಪುನರ್ಬಳಕೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ.

ಭಾರತದಲ್ಲೂ ಕೋಟ್ಯಂತರ ಜನರು ಶುದ್ಧ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹಲವೆಡೆ ನೀರಿನ ಮೂಲವಿದ್ದರೂ, ಆ ನೀರು ಕುಡಿಯಲು ಯೋಗ್ಯವಲ್ಲದ ಸ್ಥಿತಿಯಲ್ಲಿರುತ್ತದೆ.

ಅಲ್ಲದೆ, ಈ ಸಮಸ್ಯೆ ಹೆಚ್ಚಾಗಿ ಕಾಡುವುದು ನಮ್ಮ ಹಳ್ಳಿಗಳಲ್ಲಿ. ಇಂತಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ಸೂರ್ಯಜೆನ್ ಸಾಧನಗಳನ್ನು ತಯಾರಿಸಿದೆ.  ಈ ಸಾಧನ ಮಾರುಕಟ್ಟೆಯಲ್ಲಿ ಲಭ್ಯವಿರುವ ನೀರು ಶುದ್ಧೀಕರಣ ಸಾಧನಗಳಿಗಿಂತ ಅಗ್ಗ. ಅಲ್ಲದೆ ಅವು ಸೌರಶಕ್ತಿಯ ಮೇಲೆ ಓಡುವುದರಿಂದ, ಅವಕ್ಕೆ ವಿದ್ಯುತ್ ಶಕ್ತಿಯ ಅಗತ್ಯವೂ ಇಲ್ಲ.

‘ನಮ್ಮ ದೇಶದ ಹಲವು ಹಳ್ಳಿಗಳಲ್ಲಿ ಕುಡಿಯಲು ಶುದ್ಧ ನೀರು ಇರುವುದೇ ಇಲ್ಲ ಅಥವಾ ಇದ್ದರೂ ಎಲ್ಲರ ಅವಶ್ಯಕತೆ ನೀಗಿಸುವಷ್ಟು ಇರುವುದಿಲ್ಲ. ಸೌರ ಶಕ್ತಿಯ ಮೇಲೆ ಕೆಲಸ ಮಾಡುವ ನಮ್ಮ ನೀರು ಶುದ್ಧೀಕರಣ ಸಾಧನವು ಅಂತಹ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಪ್ರಯೋಜನಕಾರಿಯಾಗಲಿದೆ. ನಮ್ಮ ಸಾಧನವು ಸಮುದ್ರ, ನದಿ ಕೊಳ, ಬಾವಿ ಹೀಗೆ ಯಾವುದೇ ಮೂಲದಿಂದ ಸಂಗ್ರಹಿಸಿದ ನೀರನ್ನೂ  ಶುದ್ಧಗೊಳಿಸುತ್ತದೆ’ ಎನ್ನುತ್ತಾರೆ ವಸಂತ್.

ಹಾಗೆ ನೋಡಿದರೆ ಇದು ಕೆಲಸ ಮಾಡುವುದು ಅತ್ಯಂತ ಸರಳ ನಿಯಮಗಳ ಮೇಲೆ. ಇದು ಮಾಡುವುದಿಷ್ಟೇ: ಕಲುಷಿತ ನೀರನ್ನು ಸೌರ ಶಕ್ತಿಯಿಂದ ಕುದಿಸಿ ಇಂಗಿಸಿ, ನಂತರ ಆವಿಯು ಮತ್ತೆ ನೀರಾಗಿ ಒಂದು ತಣ್ಣನೆಯ ವಸ್ತುವಿನ ಬೀಳುತ್ತದೆ. ಈ ನೀರಿನಲ್ಲಿ ಬ್ಯಾಕ್ಟೀರಿಯಾ, ಲೋಹಗಳು, ಫ್ಲೋರೈಡ್, ಆರ್ಸೆನಿಕ್ ಮುಂತಾದವುಗಳು ಇರುವುದಿಲ್ಲ.

ಕುದಿಸಿ ಆರಿಸಿದ ನೀರಿನಲ್ಲಿ ಸತ್ತ ಬ್ಯಾಕ್ಟೀರಿಯಾಗಳು ಇರುತ್ತವೆ. ಸೂರ್ಯಜೆನ್ ಸಾಧನದಲ್ಲಿ ಶುದ್ಧೀಕರಣಗೊಂಡ ನೀರಿನಲ್ಲಿ ಅವುಗಳು ಕೂಡ ಇರುವುದಿಲ್ಲ. ಈ ಸಾಧನವು ಮೂರು ಲೀಟರ್ ಕಲುಷಿತ ನೀರಿನಿಂದ ಒಂದೂವರೆ ಲೀಟರ್ ನಷ್ಟು, ಕುಡಿಯಲು ಯೋಗ್ಯವಾದ ನೀರನ್ನು ತಯಾರಿಸಬಲ್ಲದು. ಇದು ದುಬಾರಿಯೂ ಅಲ್ಲ ಮತ್ತು ಇದು ಕೆಲಸ ಮಾಡಲು ಸೌರ ಶಕ್ತಿಯನ್ನು ಬಿಟ್ಟು ಬೇರೆ ಇಂಧನದ ಅವಶ್ಯಕತೆಯೂ ಇಲ್ಲ.

ಅವರ ಮತ್ತೊಂದು ಆವಿಷ್ಕಾರವೆಂದರೆ ಉಪ್ಪು ನೀರಿನಿಂದ ಉರಿಯುವ ದೀಪ. ಈ ಸಾಧನವು ಅರ್ಧ ಲೀಟರ್ ನೀರು ಮತ್ತು ಎರಡು ಚಮಚ ನೀರಿನಿಂದ 12 ಎಲ್‌ಇಡಿಗಳನ್ನು ಉರಿಸಬಲ್ಲದು. ವಿದ್ಯುತ್ ವಿತರಣಾ ಜಾಲದಿಂದ ಹೊರಗುಳಿದಿರುವ ಸಾವಿರಾರು ಹಳ್ಳಿಗಳಿಗೆ ಈ ದೀಪವು ವರದಾನವಾಗಬಲ್ಲದು. ‘ಈ ಸಾಧನದಲ್ಲಿ ಮೆಗ್ನೀಷಿಯಂ ಮತ್ತು ಇಂಗಾಲದ ಎಲೆಕ್ಟ್ರೋಡ್‌ಗಳನ್ನು ಬಳಸಿದ್ದೇವೆ. ಇವೆರಡನ್ನೂ ಪರಿಸರಕ್ಕೆ ಹಾನಿಯಾಗದಂತೆ ವಿಲೇವಾರಿ ಮಾಡಬಹುದು.

ಮೆಗ್ನೀಷಿಯಂ ಎಲೆಕ್ಟ್ರೋಡ್‌ಅನ್ನು ಒಂದೂವರೆ ಸಾವಿರ ಗಂಟೆಗಳ ಬಳಕೆಯ ನಂತರ ಬದಲಾಯಿಸಿದರೆ ಸಾಕು. ಇಂಗಾಲ ಎಲೆಕ್ಟ್ರೋಡ್ ಬದಲಾಯಿಸುವ ಅವಶ್ಯಕತೆಯೇ ಇಲ್ಲ. ಹಾಗಾಗಿ  ಉಪ್ಪು ನೀರಿನಿಂದ ಓಡುವ ನಮ್ಮ ಲಾಂದ್ರವು ಸಂಪೂರ್ಣವಾಗಿ ಪರಿಸರಸ್ನೇಹಿ’ ಎನ್ನುತ್ತಾರೆ ಅವರು. ಹೇರಳವಾಗಿ ಲಭ್ಯವಿರುವ ಸಮುದ್ರದ ನೀರನ್ನು ಕೂಡ ಈ ಸಾಧನದಲ್ಲಿ ಬಳಸಬಹುದು. ಇದರ ಬೆಲೆ ಕೇವಲ ₹700!

ವಸಂತ್ ಓದಿದ್ದು ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ. ಭೌತವಿಜ್ಞಾನ  ವಲಯದಲ್ಲಿ ಅವರು ಅತ್ಯಂತ ಸೂಕ್ಷ್ಮ ಅಳತೆಗಳನ್ನು ಮಾಡುವುದಕ್ಕೆ ಪ್ರಸಿದ್ಧ. ಆದರೆ ಈಗ, ಸೂರ್ಯಜೆನ್ ಮೂಲಕ, ನಮ್ಮ ಸಮಾಜದ ಸಂಕೀರ್ಣ ಸಮಸ್ಯೆಗಳಿಗೆ ಕೂಡ  ಸರಳ ಪರಿಹಾರ ಕಂಡುಹಿಡಿಯಬಹುದು ಎಂದು ತೋರಿಸುತ್ತಿದ್ದಾರೆ

   -ಗುಬ್ಬಿ ಲ್ಯಾಬ್ಸ್‌
(ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT