ಬೆಂಗಳೂರು: ‘ಬಿಜೆಪಿ ಒಂದು ಸುಳ್ಳಿನ ಪಕ್ಷ. ಜಗದೀಶ ಶೆಟ್ಟರ್ ಅವರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೆ ಗೊತ್ತೇ ಇಲ್ಲ. ಅವರು ದಿನಕ್ಕೊಂದು ಸುಳ್ಳು ಹೇಳುತ್ತಾರೆ. ಅದಕ್ಕೆಲ್ಲ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಅವರು, ತಮ್ಮ ವಿರುದ್ಧ ಶೆಟ್ಟರ್ ನೀಡಿದ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು. ‘ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಮಾಡಿದ ತಪ್ಪುಗಳನ್ನು ನಾವೀಗ ಸರಿಪಡಿಸುತ್ತಿದ್ದೇವೆ. ಡಿನೋಟಿಫೈ ಹಗರಣಗಳೆಲ್ಲ ಅವರದೇ ಕೊಡುಗೆ’ ಎಂದು ತಿಳಿಸಿದರು.
‘ನಿಗಮ– ಮಂಡಳಿಗಳಿಗೆ ನೇಮಕ ಮಾಡಲು ಪ್ರಾಥಮಿಕ ಸುತ್ತಿನ ಮಾತುಕತೆಯಷ್ಟೇ ಈಗ ನಡೆದಿದೆ. ವಿಸ್ತೃತವಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.