ಶ್ರೀನಿವಾಸಪುರ: ಕೆಳ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಸ್ವತಃ ತಂದೆಯೇ ಮಗಳ ಕುತ್ತಿಗೆ ಬಿಗಿದು ಮರ್ಯಾದೆಗೇಡು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಕಮತಂಪಲ್ಲಿಯಲ್ಲಿ ಭಾನುವಾರ ನಡೆದಿದೆ.
ಒಕ್ಕಲಿಗ ಸಮುದಾಯದ ರೆಡ್ಡಿ ಪ್ರಿಯಾ (17) ಕೊಲೆಯಾದ ಯುವತಿ. ಘಟನೆ ಸಂಬಂಧ ಬೈರಾರೆಡ್ಡಿ (45), ತಾಯಿ ಪದ್ಮಾ (35) ಹಾಗೂ ಆಕೆಯ ತಮ್ಮನನ್ನು ಗೌನಿಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸಪುರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರೆಡ್ಡಿ ಪ್ರಿಯಾ, ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಟೊಮೆಟೊ ಮಂಡಿಯಲ್ಲಿ ಕೆಲಸ ಮಾಡುತ್ತಿರುವ ಭೋವಿ ಜನಾಂಗದ ಹರೀಶ್ ಎಂಬ ಯುವಕನನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದರು.
‘ಈ ವಿಷಯ ಮನೆಯವರಿಗೆ ತಿಳಿದು ಆತನಿಂದ ದೂರವಾಗುವಂತೆ ಆಕೆಗೆ ಬುದ್ಧಿ ಹೇಳಿದ್ದರು. ಆದರೂ ಆಕೆ ಆತನ ಸಂಪರ್ಕ ಬಿಟ್ಟಿರಲಿಲ್ಲ’ ಎಂದು ಗೌನಿಪಲ್ಲಿ ಪೊಲೀಸರು ಹೇಳಿದರು.
ಬೈಕ್ನಲ್ಲಿ ಕರೆದೊಯ್ದು ಕೃತ್ಯ: ‘ಸಂಬಂಧಿಕರ ಮನೆಗೆ ಹೋಗಿ ಬರೋಣ ಎಂದು ಬೈರಾರೆಡ್ಡಿ ಬಲವಂತವಾಗಿ ತಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದಾರೆ. ಹೊಲವೊಂದಕ್ಕೆ ಕರೆದೊಯ್ದು ಪ್ಲಾಸ್ಟಿಕ್ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಮನೆಗೆ ಬಂದ ಬೈರಾರೆಡ್ಡಿ ಪತ್ನಿ, ಸಹೋದರರು ಹಾಗೂ ಊರಿನ ಕೆಲವರಿಗೆ ವಿಷಯ ತಿಳಿಸಿದ್ದಾರೆ. ಶವವನ್ನು ಸುಡಲು ತಯಾರಿ ನಡೆಸುತ್ತಿದ್ದರು.
ಅಷ್ಟರಲ್ಲಿ ಗ್ರಾಮದ ಕೆಲವರು ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಮನೆಯವರನ್ನು ವಿಚಾರಿಸಿದಾಗ ಕೃತ್ಯ ಒಪ್ಪಿಕೊಂಡರು’ ಎಂದು ಪೊಲೀಸರು ತಿಳಿಸಿದರು.