ಸಾಗರ: ದೇಶದ ಸಂವಿಧಾನ ಅತ್ಯುತ್ತಮವಾಗಿದ್ದರೂ, ಅದು ಐರೋಪ್ಯ ಮಾದರಿಯನ್ನೇ ಅನುಸರಿಸಿದೆ. ಈ ನೆಲದ ಗಾಂಧಿ ಹಾಗೂ ಟ್ಯಾಗೋರ್ ಅವರ ವಿಚಾರಧಾರೆಯನ್ನು ಅದು ಒಳಗೊಂಡಿದ್ದರೆ, ಇನ್ನಷ್ಟು ಭಿನ್ನವಾಗಿರುತ್ತಿತ್ತು ಎಂದು ಚಿಂತಕ ಆಶೀಶ್ ನಂದಿ ಅಭಿಪ್ರಾಯಪಟ್ಟರು.
ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಮಂಗಳವಾರ ‘ಭಾರತೀಯ, ಭಾರತೀಯತೆ, ಭಾರತತ್ವದ ಪರಿಕಲ್ಪನೆ’ ಕುರಿತು ಅವರು ಮಾತನಾಡಿದರು.
ಸದ್ಯಕ್ಕೆ ದೇಶವು ಸಾವರ್ಕರ್ ಪ್ರತಿಪಾದಿಸಿದ ಏಕಾಕೃತಿಯ ರಾಷ್ಟ್ರಪ್ರಭುತ್ವದ ದಾರಿ ಹಿಡಿದಿದೆ ಎಂದೆನಿಸಿದರೂ, ಅಂತಿಮವಾಗಿ ಸಾಮುದಾಯಿಕ ಪ್ರಜ್ಞೆಯು ದೇಶವನ್ನು ಆ ಸ್ವರೂಪಕ್ಕೆ ಕೊಂಡೊಯ್ಯದು ಎಂಬ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಆಧುನಿಕ ಕಾಲಘಟ್ಟದಲ್ಲಿ ರಾಷ್ಟ್ರಪ್ರಭುತ್ವ ಎನ್ನುವುದು ಪ್ರಮುಖವಾಗಿದೆ. ವಸಾಹತುಶಾಹಿಯೂ ಇದಕ್ಕೆ ಪೂರಕವಾಗಿದೆ. ಐರೋಪ್ಯ ಮಾದರಿಯ ರಾಷ್ಟ್ರಪ್ರಭುತ್ವದ ಹಿನ್ನೆಲೆಯಲ್ಲಿ ಸಾವರ್ಕರ್, ಗಾಂಧಿ ಅವರನ್ನು ವಿರೋಧಿಸಿದ್ದರು ಎಂದು ನೆನಪಿಸಿಕೊಂಡರು.
ಭಾರತೀಯ ನಾಗರಿಕತೆ ಮೌಖಿಕ ಪಠ್ಯಗಳನ್ನು ಆಧರಿಸಿದೆ. ದೇಶದ ಐವತ್ತು ವಿಶ್ವವಿದ್ಯಾಲಯಗಳು ಸಂಗೀತದಲ್ಲಿ ಪದವಿ ನೀಡುತ್ತಿದ್ದರೂ, ಇವುಗಳಲ್ಲಿ ಪದವಿ ಪಡೆದವರು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿಲ್ಲ ಎನ್ನುವುದೇ ಉದಾಹರಣೆ ಎಂದರು.
ಜೀವನಕ್ರಮದಲ್ಲೇ ವಿಶ್ವಪ್ರಜ್ಞೆ: ಭಾರತೀಯರ ನಿತ್ಯ ಜೀವನ ಕ್ರಮದಲ್ಲೆ ವಿಶ್ವಪ್ರಜ್ಞೆ ಎಂಬುದು ಮಿಳಿತಗೊಂಡಿದೆ. ಅದು ಯೂರೋಪ್ನಿಂದ ಎರವಲು ಪಡೆದ ಪ್ರಜ್ಞೆ ಅಲ್ಲ. ಆಧುನಿಕತೆಗಿಂತಲೂ ಮೊದಲೇ ರೂಪುಗೊಂಡ ಸಶಕ್ತವಾದ ವಿಶ್ವಪ್ರಜ್ಞೆ ಎಂದರು.
ಭಾರತತ್ವದ ಪರಿಕಲ್ಪನೆಯನ್ನು ನಿಖರವಾಗಿ ಹೇಳಲು ಪ್ರಯತ್ನಪಟ್ಟಷ್ಟೂ ಅದು ಬೆರಳ ಸಂಧಿಯಿಂದ ಜಾರಿ ಹೋಗುತ್ತದೆ. ಅದರ ವ್ಯಾಖ್ಯಾನ ಆ ಕ್ಷಣಕ್ಕೆ ಸರಿ ಅನಿಸಿದರೂ ನಂತರ ಬೇರೆಯದ್ದೇ ಆಗಿರುತ್ತದೆ. ಭಾರತೀಯ ನಾಗರಿಕತೆ ಚಲನಶೀಲಗುಣ ಹೊಂದಿದೆ ಎಂದು ವಿಶ್ಲೇಷಿಸಿದರು.
ದೇಸಿಯ ಮೌಖಿಕ ಪರಂಪರೆ ಯಾವುದನ್ನು ಮರೆಯಬೇಕು, ಯಾವುದನ್ನು ಉಳಿಸಿಕೊಳ್ಳಬೇಕು ಎಂಬ ನೀತಿಪ್ರಜ್ಞೆ ಹೊಂದಿದೆ. ನಮ್ಮಲ್ಲಿರುವ ಸಾಮುದಾಯಿಕ ಕಲ್ಪನೆಯಿಂದಾಗಿ ವೈರಿಗಳನ್ನು ಎಚ್ಚರದಿಂದ ಆರಿಸುವ ವಿವೇಕವಿದೆ. ದೇಶ ವಿಭಜನೆ ಕಾಲದಲ್ಲಿ ನಡೆದ ತೀವ್ರ ಹಿಂಸೆಯ ಸಂದರ್ಭದಲ್ಲಿದ್ದ ಸಮುದಾಯ ಪ್ರಜ್ಞೆ ಗುಜರಾತ್ನಲ್ಲಿ ನಡೆದ ಕೋಮು ಗಲಭೆಯ ಪರಿಸ್ಥಿತಿಯಲ್ಲಿ ಇಲ್ಲವಾಯ್ತು ಎಂದು ವಿಷಾದ ವ್ಯಕ್ತಪಡಿಸಿದರು.