ಜಮ್ಮು– ಕಾಶ್ಮೀರ ವಿಧಾನಸಭೆಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ದಾಖಲೆ ಮತದಾನವಾಗಿದೆ. ಜಮ್ಮು– ಕಾಶ್ಮೀರದ ಒಟ್ಟು 87 ಕ್ಷೇತ್ರಗಳಲ್ಲಿ 15 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಮತದಾನದಲ್ಲಿ ಶೇಕಡ 71ರಷ್ಟು ಮತದಾನವಾಗಿರುವುದು ದಾಖಲೆ. ಈ ಪ್ರಮಾಣದ ಮತದಾನವಾಗಿರುವುದು ಕಳೆದ 25 ವರ್ಷಗಳಲ್ಲಿ ಇದೇ ಮೊದಲು.
ಜೆಕೆಎಲ್ಎಫ್ ಹಾಗೂ ಹುರಿಯತ್ ಕಾನ್ಫೆರೆನ್ಸ್ನ ಎಲ್ಲಾ ಬಣಗಳ ಪ್ರತ್ಯೇಕತಾವಾದಿಗಳ ಗುಂಪು ಮತದಾನವನ್ನು ಬಹಿಷ್ಕರಿಸಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದವು. ಆದರೆ ಈ ಕರೆಯನ್ನು ಧಿಕ್ಕರಿಸಿ ಕೊರೆಯುವ ಚಳಿಯಲ್ಲಿ ಮತಗಟ್ಟೆಗಳಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜನ ಮತದಾನ ಮಾಡಿದ್ದಾರೆ. ಹಾಗೆಯೇ ಜಾರ್ಖಂಡ್ನಲ್ಲೂ 13 ವಿಧಾನಸಭಾ ಕ್ಷೇತ್ರಗಳಿಗೆ ಶೇ 62ರಷ್ಟು ಮತದಾನವಾಗಿದೆ. ಮಾವೊವಾದಿಗಳಿಂದಾಗಿ ಸಣ್ಣಪುಟ್ಟ ಘರ್ಷಣೆಗಳ ನಡುವೆಯೂ ಈ ಮಟ್ಟದ ಮತದಾನ ಆಗಿರುವುದು ವಿಶೇಷ.
ಸೂಕ್ತ ಭದ್ರತೆ, ವಿಶ್ವಾಸವರ್ಧನೆ ಹಾಗೂ ಮತದಾರರ ಉತ್ಸಾಹದಿಂದ ಇದು ಸಾಧ್ಯವಾಗಿದೆ. ಈ ಎರಡೂ ರಾಜ್ಯಗಳಿಗೆ ಐದು ಹಂತಗಳಲ್ಲಿ ಚುನಾವಣೆಗಳು ನಡೆಯಲಿದ್ದು ಮುಂದಿನ ನಾಲ್ಕು ಹಂತಗಳಲ್ಲೂ ಉತ್ಸಾಹದಾಯಕ ಮತದಾನಕ್ಕೆ ಇದು ಪ್ರೇರಣೆ, ಸ್ಫೂರ್ತಿ ನೀಡುವಂತಹದ್ದು. ಪ್ರಜಾಪ್ರಭುತ್ವದ ಹಾದಿಯಲ್ಲಿ ಸಾಗಲು ಜನರಿಗಿರುವ ವಿಶ್ವಾಸಕ್ಕೆ ಇದು ದ್ಯೋತಕ.
ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಶ್ಮೀರದ ಈಗಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಅವರ ನ್ಯಾಷನಲ್ ಕಾನ್ಫೆರೆನ್ಸ್ (ಎನ್ಸಿ), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಈ ಸ್ಪರ್ಧೆ ಉಂಟಾಗಿದೆ. ಕಾಶ್ಮೀರದಲ್ಲಿ ಈ ಹಿಂದೆ ಬಿಜೆಪಿ ಎಂದೂ ಮುಖ್ಯ ಪಕ್ಷವಾಗಿರಲಿಲ್ಲ. ಆದರೆ ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದೆ. ಜಮ್ಮು –ಕಾಶ್ಮೀರದ 6 ಲೋಕಸಭಾ ಸ್ಥಾನಗಳಲ್ಲಿ 3ರಲ್ಲಿ ಬಿಜೆಪಿ ಗೆದ್ದಿದ್ದು ವಿಶೇಷ. ಇತರ 3 ಸ್ಥಾನಗಳನ್ನು ಪಿಡಿಪಿ ಗೆದ್ದುಕೊಂಡಿದೆ. ಕಾಂಗ್ರೆಸ್– ನ್ಯಾಷನಲ್ ಕಾನ್ಫೆರೆನ್ಸ್ ಮೈತ್ರಿಕೂಟಕ್ಕೆ ಒಂದೂ ಸ್ಥಾನ ಗೆಲ್ಲಲಾಗದಿದ್ದುದು ವಿಪರ್ಯಾಸ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫೆರೆನ್ಸ್ ಈ ವರ್ಷ ಜುಲೈ ತಿಂಗಳವರೆಗೂ ಮಿತ್ರಪಕ್ಷಗಳಾಗಿದ್ದವು. ಆದರೆ ಈಗ ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸಿವೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಹಾಗೂ ಹರಿಯಾಣಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಗೆಲುವು ಕಾಶ್ಮೀರದಲ್ಲೂ ಪುನರಾವರ್ತನೆಯಾಗಬಹುದೆಂಬ ನಿರೀಕ್ಷೆ ಬಿಜೆಪಿಯದು.
ಪ್ರವಾಹದಿಂದಾಗಿ ಜಮ್ಮು– ಕಾಶ್ಮೀರ ನಲುಗಿರುವ ಸಂದರ್ಭ ಇದು. ಸುಮಾರು 15 ಲಕ್ಷ ಜನರಿಗೆ ತೊಂದರೆಯಾಗಿದ್ದು ಹಲವರು ತಮ್ಮ ಜೀವನೋಪಾಯವನ್ನೇ ಕಳೆದುಕೊಂಡಿದ್ದಾರೆ. ಗಡಿಯಾಚೆಗಿನ ಘರ್ಷಣೆಗಳಿಂದ ಅನೇಕ ಗ್ರಾಮಸ್ಥರು ನೆಲೆ ಕಳೆದುಕೊಂಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪ್ರತ್ಯೇಕತಾವಾದ, ಹಿಂಸಾಚಾರದ ರಾಜಕಾರಣಕ್ಕಿಂತ ಅಭಿವೃದ್ಧಿಯ ರಾಜಕಾರಣವನ್ನು ಜನ ಬಯಸುತ್ತಿರುವುದು ಸ್ಪಷ್ಟ. ಈ ಆಶಯಕ್ಕೆ ಪೂರಕವಾಗಿ ಪ್ರಜಾತಂತ್ರ ಪ್ರಕ್ರಿಯೆಯಲ್ಲಿ ಮತದಾರರು ಸಕ್ರಿಯವಾಗಿ ಪಾಲ್ಗೊಂಡಿರುವುದು ಸಕಾರಾತ್ಮಕ ಬೆಳವಣಿಗೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.