ನವದೆಹಲಿ(ಪಿಟಿಐ): ನೂತನ ಪ್ರಧಾನಿಯಾಗಿ ತಾವು ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳ ಮುಖಂಡರನ್ನು ಆಹ್ವಾನಿಸಿದ್ದು ‘ಸಕಾಲದಲ್ಲಿ ತೆಗೆದುಕೊಂಡ ಸೂಕ್ತ ನಿರ್ಧಾರ’ ಎಂದು ಬಣ್ಣಿಸಿರುವ ಮೋದಿ, ತಮ್ಮ ಈ ನಡೆಯು ಇಡೀ ಜಗತ್ತಿಗೆ ಭಾರತದ ಶಕ್ತಿ ಏನು ಎನ್ನುವುದನ್ನು ತೋರಿಸಿಕೊಟ್ಟಿದೆ ಎಂದರು.
‘ನಮ್ಮ ಪ್ರಜಾತಂತ್ರದ ಸತ್ವವನ್ನು ಜಗತ್ತು ಅರಿಯಬೇಕು. ನಮ್ಮದು ವಿಶಾಲ ಹಾಗೂ ಪ್ರಾಚೀನ ರಾಷ್ಟ್ರ. ನಾವು ಶಕ್ತಿಶಾಲಿಗಳು ಎನ್ನುವುದನ್ನು ಜಗತ್ತಿಗೆ ಮನವರಿಕೆ ಮಾಡಿಕೊಡಬೇಕಿದೆ. ಆಗ ಮಾತ್ರ ದೇಶಕ್ಕೆ ಸಿಗಬೇಕಾದ ಗೌರವ ಹಾಗೂ ಸ್ಥಾನಮಾನ ದೊರೆಯುತ್ತದೆ’ ಎಂದು ಮೋದಿ ನುಡಿದರು.
ಮೋದಿ ಭೇಟಿಯಾದ ರಾಜನ್: ಮಂಗಳವಾರ ಹಣಕಾಸು ನೀತಿ ಪರಾಮರ್ಶೆ ನಡೆಯಲಿರುವ ಹಿನ್ನೆಲೆ ಯಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಆರ್ಥಿಕ ಸ್ಥಿತಿ ಮತ್ತು ಬೆಲೆ ಏರಿಕೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿ ಮಂಗಳವಾರ ರಿಸರ್ವ್ ಬ್ಯಾಂಕ್ನ ದ್ವೈಮಾಸಿಕ ಆರ್ಥಿಕ ನೀತಿ ಪರಾಮರ್ಶೆ ನಡೆಯಲಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನೂ ಕಳೆದ ವಾರ ರಾಜನ್ ಭೇಟಿಯಾಗಿ ಬೆಲೆ ಏರಿಕೆ ತಡೆ ಬಗ್ಗೆ ಚರ್ಚೆ ನಡೆಸಿದ್ದರು.