ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜಾಬಂದಿಗಳೀಗ ಸ್ನಾತಕೋತ್ತರ ಪದವೀಧರರು!

ಕೆಎಸ್‌ಒಯು ಘಟಿಕೋತ್ಸವದಲ್ಲಿ ಇಂದು ಪದವಿ ಪ್ರದಾನ
Last Updated 4 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದರೂ ಇವರ ಶಿಕ್ಷಣದ ದಾಹ ಇಂಗಲಿಲ್ಲ. 40 ವರ್ಷ ದಾಟಿದ ಈ ಸಜಾಬಂದಿಗಳು, ದೂರ ಶಿಕ್ಷಣ ಮೂಲಕ ಸ್ನಾತಕೋತ್ತರ ಪದವೀಧರರಾಗಿದ್ದಾರೆ!

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌­ಒಯು) ಗುರುವಾರ ನಡೆಯುವ ಘಟಿ­ಕೋತ್ಸ­ವದಲ್ಲಿ ಪಾಲ್ಗೊಳ್ಳಲಿರುವ  ಸಜಾ­ಬಂದಿ­ಗಳಾದ ಎಸ್‌.ನರೇಂದ್ರ (ಕೈದಿ ಸಂಖ್ಯೆ 19378) ಹಾಗೂ ಎಸ್‌. ಆರ್‌. ವೆಂಕಟೇಶ್ (ಕೈದಿ ಸಂಖ್ಯೆ 596), ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿ ಪಡೆಯಲಿದ್ದಾರೆ.

43 ವರ್ಷದ ನರೇಂದ್ರ, ಎಸ್ಸೆಸ್ಸೆಲ್ಸಿ ಓದಿದ್ದರು. ವೃತ್ತಿಯಲ್ಲಿ ನೇಕಾರರಾಗಿದ್ದ ಅವರು, ಪತ್ನಿ–ಮಕ್ಕಳ ಜತೆ ಕಾಮಾಕ್ಷಿ­ಪಾಳ್ಯ­ದಲ್ಲಿ ನೆಲೆಸಿದ್ದರು. ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾದ ಅವರಿಗೆ ಎಸಿಎಂಎಂ ನ್ಯಾಯಾಲಯ 2007ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತು.
ಎಲ್ಲ ಕೈದಿಗಳಂತೆಯೇ ಆರಂಭದ ದಿನಗಳನ್ನು ಕಳೆದ ನರೇಂದ್ರ, ಪತ್ನಿ ಸಾವಿನ ನಂತರ ಖಿನ್ನತೆಗೆ ಒಳಗಾದರು. ಕ್ರಮೇಣ  ಕಾರಾಗೃಹದ ಗ್ರಂಥಾಲಯ­ಗಳಿಗೆ ತೆರಳಿ, ಪುಸ್ತಕ ಓದುವ ಹವ್ಯಾಸ ಬೆಳೆಸಿ ಕೊಂಡರು. ಶಿಕ್ಷಣ ಮುಂದುವರಿ­ಸುವ ಹಂಬಲವನ್ನು ಕಾರಾಗೃಹದ ಅಧಿಕಾರಿಗಳ ಮುಂದಿಟ್ಟಾಗ, ಅದಕ್ಕೆ ಅನುಮತಿಯೂ ಸಿಕ್ಕಿತು.

2010ರಲ್ಲಿ ಕೆಎಸ್‌ಒಯು ನಲ್ಲಿ ದೂರ ಶಿಕ್ಷಣದ ಮೂಲಕ ಪದವಿ ಪ್ರವೇಶ ಪಡೆದ ನರೇಂದ್ರ, ಇತಿಹಾಸ, ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ (ಎಚ್‌ಇಪಿ) ವಿಷಯಗಳನ್ನು ಆಯ್ಕೆ ಮಾಡಿ­ಕೊಂಡರು. ಪ್ರಥಮ ದರ್ಜೆ­ಯಲ್ಲೇ ಉತ್ತೀರ್ಣರಾದ ಅವರು, 2012ರಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ ಶಿಕ್ಷಣ ಮುಂದುವರಿಸಿದರು. ಜೈಲಿನ ಗ್ರಂಥಾಲಯವನ್ನು ಬಳಸಿ­ಕೊಂಡ ಅವರು,  ಎಂ.ಎ ಪರೀಕ್ಷೆಯಲ್ಲಿ ಶೇ 63.1 ಅಂಕ ಪಡೆದು ಪ್ರಥಮ ದರ್ಜೆಯಲ್ಲೇ ಉತ್ತೀರ್ಣರಾಗಿದ್ದಾರೆ. 

ಕೈದಿಗಳ ಕಾವಲುಗಾರ: ಜೈಲಿನಲ್ಲಿ ಕೈದಿ­ಗಳನ್ನು ಕಾಯುವ ಕೆಲಸ ಮಾಡುವ ವೆಂಕಟೇಶ್‌ ಕೂಡ ಘಟಿಕೋತ್ಸವದ ಮತ್ತೊಬ್ಬ ಆಕರ್ಷಣೆ. ಇವರಿಗೆ 41 ವರ್ಷ. ‘ತುಮಕೂರಿನ ಸೀತಕಲ್ಲು ಗ್ರಾಮದ ವೆಂಕಟೇಶ್‌ಗೆ 2006ರಲ್ಲಿ ಶಿಕ್ಷೆ ಪ್ರಕಟವಾಯಿತು. ಉತ್ತಮ ನಡತೆ ಕಾರಣ ಕಾವಲುಗಾರನ ಕೆಲಸ ನೀಡಲಾಯಿತು. ರಾತ್ರಿ ವೇಳೆ ಬ್ಯಾರಕ್‌ ಎದುರು ಕುಳಿತುಕೊಂಡೆ ಅಧ್ಯಯನ ಮಾಡುತ್ತಿದ್ದ ಅವರು, ಎಂ.ಎ ಪರೀಕ್ಷೆ­ಯಲ್ಲಿ ಶೇ 61.3 ಅಂಕ ಪಡೆದಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಆತ್ಮ ವಿಶ್ವಾಸ ಮೂಡಿಸಿ
‘ಸಜಾಬಂದಿಗಳು ದೂರ ಶಿಕ್ಷಣದ ಮೂಲಕ ಬಿ.ಎ. ಬಿ.ಕಾಂ, ಎಂ.ಎ, ಎಂ.ಕಾಂ, ಎಂಬಿಎ ಸೇರಿದಂತೆ ವಿವಿಧ ಕೋರ್ಸ್‌ಗಳನ್ನು ಮಾಡುತ್ತಿ ದ್ದಾರೆ. ಪ್ರವೇಶ ಶುಲ್ಕ ಸೇರಿದಂತೆ ಅಗತ್ಯ ಸೌಲಭ್ಯ ಗಳನ್ನು ಸರ್ಕಾರ ಒದಗಿಸುತ್ತಿದೆ. ಅವರ ಆತ್ಮ ವಿಶ್ವಾಸವನ್ನು ಬಲಪಡಿಸುವ ಕೆಲಸ ನಡೆಯುತ್ತಿದೆ. ನರೇಂದ್ರ ಮತ್ತು ವೆಂಕಟೇಶ್ ಶ್ರಮ ಶ್ಲಾಘನೀಯ’  – ಕಮಲ್ ಪಂತ್, ರಾಜ್ಯ ಕಾರಾಗೃಹಗಳ ಇಲಾಖೆ ಎಡಿಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT