ಬೆಂಗಳೂರು: ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಗಿರಿನಗರ ಸಮೀಪದ ಚಾಮುಂಡೇಶ್ವರಿ ಕೊಳೆಗೇರಿಯಲ್ಲಿ ನಿರ್ಮಾಣ ಮಾಡುತ್ತಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಜ್ಜಾ ಕುಸಿದು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
ರಾಯಚೂರು ಜಿಲ್ಲೆಯ ರಾಮ್ಸಿಂಗ್ (22) ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆ ನಿವಾಸಿ ಅಶೋಕ್ ಕುಮಾರ್ (34) ಗಾಯಗೊಂಡವರು.
ರಾಮ್ಸಿಂಗ್ ಮತ್ತು ಅಶೋಕ್ಕುಮಾರ್ ಅವರು ಮಧ್ಯಾಹ್ನ 12.30ರ ಸುಮಾರಿಗೆ ಕಟ್ಟಡದ ಎರಡನೇ ಮಹಡಿಯಲ್ಲಿ ಸಜ್ಜಾ ನಿರ್ಮಿಸಿಕೊಂಡು ಕೆಲಸ ಮಾಡುತ್ತಿದ್ದರು. ಈ ವೇಳೆ ಸಜ್ಜಾ ಕುಸಿದಿದ್ದರಿಂದ ಅವರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಕೂಡಲೇ ಇತರ ಕಾರ್ಮಿಕರು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಘಟನೆ ಸಂಬಂಧ ಕಾಮಗಾರಿಯ ಯೋಜನಾ ಎಂಜಿನಿಯರ್ ನಟರಾಜ್ ಮತ್ತು ಮೇಲ್ವಿಚಾರಕ ಸುರೇಶ್ ಅವರ ವಿರುದ್ಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.