ರಾಜ್ಯದ 2014–-19ನೇ ಅವಧಿಯ ಹೊಸ ಕೈಗಾರಿಕಾ ನೀತಿಯಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಒತ್ತು ಕೊಡಲಾಗಿದೆ. ನಮ್ಮಲ್ಲಿ ಬಹುಪಾಲು ಉದ್ಯಮಗಳು ಬೆಂಗಳೂರಿನ ಸುತ್ತಮುತ್ತ ಕೇಂದ್ರೀಕೃತವಾಗಿದ್ದು, ರಾಜ್ಯದ ಇತರೆಡೆಗಳಲ್ಲಿ ಸಮಾನವಾಗಿ ಹಂಚಿಕೆಯಾಗಿಲ್ಲ ಎಂಬ ಅಸಮಾಧಾನ ಬಹಳ ಕಾಲದಿಂದ ಇದೆ. ಅದನ್ನು ನಿವಾರಿಸುವ ಪ್ರಯತ್ನಕ್ಕೆ ಸರ್ಕಾರ ಈಗ ಕೈಹಾಕಿದೆ. ಹೈದರಾಬಾದ್ ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆಗೆ ಉತ್ತೇಜನ, ಹೊಸದಾಗಿ ಅಭಿವೃದ್ಧಿ ಪಡಿಸುವ ಕೈಗಾರಿಕಾ ವಸಾಹತಿನ ಭೂಮಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ 22.5ರಷ್ಟು ಮೀಸಲು ಸೌಲಭ್ಯವನ್ನು ಹೊಸ ನೀತಿಯಲ್ಲಿ ಕಲ್ಪಿಸಲಾಗಿದೆ.
ಮಹಿಳಾ ಉದ್ಯಮಿಗಳಿಗಾಗಿಯೇ ಎರಡು ಕೈಗಾರಿಕಾ ವಸಾಹತು ನಿರ್ಮಿಸುವ ಯೋಜನೆಯೂ ಇದೆ. ಕೈಗಾರಿಕಾ ಬೆಳವಣಿಗೆ ದರವನ್ನು ಶೇ 12ಕ್ಕೆ ಏರಿಸುವುದು, ರೂ 5 ಲಕ್ಷ ಕೋಟಿ ಬಂಡವಾಳ ಆಕರ್ಷಿಸಿ 15 ಲಕ್ಷ ಹೊಸ ಉದ್ಯೋಗಾವಕಾಶ ಸೃಷ್ಟಿಯ ಹೆಬ್ಬಯಕೆಯನ್ನೂ ಈ ನೀತಿ ಹೊಂದಿದೆ. ಆದರೆ ಈ ನೀತಿಯನ್ನು ಸಾಕಾರಗೊಳಿಸಲು ರಸ್ತೆ, ನೀರು, ವಿದ್ಯುತ್, ರೈಲು ಮುಂತಾದ ಮೂಲಸೌಕರ್ಯಗಳಿರಬೇಕಾದುದು ಅಗತ್ಯ ಎಂಬುದನ್ನು ಸರ್ಕಾರ ಮನಗಾಣಬೇಕು.
ಉದ್ಯಮಸ್ನೇಹಿ ವಾತಾವರಣ ನಿರ್ಮಿಸುವ ಹೊಣೆ ಸರ್ಕಾರದ ಮೇಲಿದೆ. ಓಬೀರಾಯನ ಕಾಲದ ಕಾಯ್ದೆಗಳ ಬದಲಾವಣೆಗೆ ಸರ್ಕಾರ ಮೊದಲು ಮುಂದಾಗಬೇಕು. ಈಗಾಗಲೇ ಕೇಂದ್ರಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ. ಕೈಗಾರಿಕೆಗಳು ನೆಲಕಚ್ಚದಂತೆ ನಿಯಮಗಳನ್ನು ರೂಪಿಸುವಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಹಾಗೆಯೇ ಕೆಂಪುಪಟ್ಟಿಯ ಕಿರಿಕಿರಿ ನಿವಾರಣೆ, ಅಡ್ಡಗಾಲು ಹಾಕುವ ನೌಕರಶಾಹಿಗೆ ಲಗಾಮು, ತೆರಿಗೆ ಪದ್ಧತಿ ಸುಧಾರಣೆ, ದಕ್ಷವಾಗಿ ಕಾರ್ಯನಿರ್ವಹಿಸುವ ಏಕಗವಾಕ್ಷಿ ವ್ಯವಸ್ಥೆ ಇತ್ಯಾದಿ ಆದ್ಯತೆಯಾಗಬೇಕು.
ಪ್ರಗತಿಗೆ ಕೈಗಾರಿಕೆಗಳು ಮುಖ್ಯ. ಆದರೆ ನಮ್ಮ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ವಾತಾವರಣ ಇಲ್ಲ ಎಂಬ ಭಾವನೆ ಉದ್ಯಮಿಗಳಲ್ಲಿ ದಟ್ಟವಾಗಿದೆ. ಪೋಸ್ಕೊ ಭೂ ವಿವಾದ, ಕೂಡಗಿ ವಿದ್ಯುತ್ ಸ್ಥಾವರ ಭೂ ವಿವಾದ, ಸರಿಯಾದ ಉತ್ತೇಜನ ಸಿಗದೆ ಧಾರವಾಡದಿಂದ ಕಾಲ್ಕಿತ್ತ ಹೀರೊಕಾರ್ಪ್... ಹೀಗೆ ಇತ್ತೀಚಿನ ವಿದ್ಯಮಾನಗಳು ಈ ಅನುಮಾನಕ್ಕೆ ಪುಷ್ಟಿ ಕೊಡುತ್ತಿವೆ. ಆದರೆ ಹೊಸ ಕೈಗಾರಿಕಾ ನೀತಿಯ ಮೂಲಕ ಸಮಾಜದ ಎಲ್ಲ ವರ್ಗಗಳಿಗೂ ಅವಕಾಶ ಕಲ್ಪಿಸುವ, ಸುಸ್ಥಿರ ಮತ್ತು ಸಮತೋಲನದ ಕೈಗಾರಿಕಾ ಅಭಿವೃದ್ಧಿ ಸಾಧಿಸುವ ಕನಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ. ತಾವು ಕೈಗಾರಿಕೆ ವಿರೋಧಿ ಅಲ್ಲ ಎಂಬಂತಹ ಸ್ಪಷ್ಟನೆಯನ್ನೂ ಅವರು ನೀಡಿದ್ದಾರೆ. ಉದ್ಯಮಿಗಳಲ್ಲಿ ಭರವಸೆಯ ಭಾವನೆ ಮೂಡಲು ಇಷ್ಟೇ ಸಾಲದು. ಅವರ ಈ ಮಾತು ಕೃತಿಯಲ್ಲೂ ಇಳಿಯಬೇಕು. ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡುಗಳು ಉದ್ಯಮಗಳನ್ನು ಆಕರ್ಷಿಸುವಲ್ಲಿ ನಮಗಿಂತ ಬಹಳ ಮುಂದಿವೆ. ಅವುಗಳಿಂದ ನಾವು ಕಲಿಯುವುದು ಸಾಕಷ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.