ಚಾಮರಾಜನಗರ: ದಲಿತ ಸಾಹಿತ್ಯಕ್ಕೆ ನಾಲ್ಕು ದಶಕದ ಇತಿಹಾಸವಿದ್ದರೂ ಇಂದಿಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ದಲಿತ ಸಾಹಿತಿಯೊಬ್ಬರು ಆಯ್ಕೆಯಾಗಿಲ್ಲ ಏಕೆ?
–ಇಲ್ಲಿನ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ದಲಿತ ಸಾಹಿತ್ಯ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಪುಂಡಲೀಕ ಹಾಲಂಬಿ ಸೇರಿದಂತೆ ಪಾಲ್ಗೊಂಡಿದ್ದ ಸಭಿಕರಿಗೆ ಈ ಪ್ರಶ್ನೆ ಕಾಡಿತು.
ಕನ್ನಡ ಸಾಹಿತ್ಯ ಪರಿಷತ್ ಈಗ ನೂರು ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಆದರೆ, ದಲಿತ ಸಾಹಿತ್ಯಾಸಕ್ತರು ಅಥವಾ ದಲಿತ ಸಾಹಿತಿಯೊಬ್ಬರು ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆ–ಯಾಗಿಲ್ಲ ಏಕೆ ಎನ್ನುವ ಮತ್ತೊಂದು ಪ್ರಶ್ನೆಗೆ ಸಮಾವೇಶದಲ್ಲಿ ಉತ್ತರ ಹುಡುಕಾಟ ನಡೆಯಿತು. ಸಮಾವೇಶದಲ್ಲಿ ಹಾಜರಿದ್ದ ಪ್ರೇಕ್ಷಕರು, ಸಾಹಿತ್ಯಾಸಕ್ತರು, ಸಾಹಿತಿಗಳ ಮನಸ್ಸಿನಲ್ಲಿ ಕಾಡಿದ ಈ ಪ್ರಶ್ನೆಗಳಿಗೆ ಉತ್ತರ ನೀಡಲು ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರೇ ಮುಂದಾದರು.
‘ಇಲ್ಲಿಯವರೆಗೆ 80 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿವೆ. ಆದರೆ, ಇಂದಿಗೂ ಪೂರ್ಣ ಪ್ರಮಾಣದಲ್ಲಿ ದಲಿತ ಸಾಹಿತಿಯೊಬ್ಬರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿಲ್ಲ. ಪರಿಷತ್ ಅಧ್ಯಕ್ಷರಾಗಿಯೂ ಆಯ್ಕೆಯಾಗಿಲ್ಲ. ಈ ಕೊರತೆಯನ್ನು ಪರಿಷತ್ ತುಂಬಿಸಲಿದೆ’ ಎಂದು ಹಾಲಂಬಿ ಹೇಳಿದಾಗ ಸಭಿಕರು ಕರತಾಡನದ ಮೂಲಕ ಸ್ವಾಗತಿಸಿದರು.
ಕನ್ನಡ ಸಾಹಿತ್ಯದಲ್ಲಿ ದಲಿತ ಸಾಹಿತಿಗಳು ಉತ್ಕೃಷ್ಟವಾದ ಸಾಹಿತ್ಯ ರಚಿಸಿದ್ದಾರೆ. ಸಮ್ಮೇಳನಾಧ್ಯಕ್ಷರಾಗಲು ಅರ್ಹತೆ ಇರುವ ಹಲವು ದಲಿತ ಸಾಹಿತಿಗಳಿದ್ದಾರೆ. ಕೆಳವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ಪರಿಷತ್ತಿನ ಮುಖ್ಯ ಉದ್ದೇಶವಾಗಿದೆ ಎಂದರು.
ಕ್ಷಮೆಯಾಚನೆ: 2011ರ ಪರಿಷ್ಕೃತ ಕನ್ನಡ ರತ್ನಕೋಶದಲ್ಲಿ ‘ಹೊಲೆಯ’ ಎನ್ನುವ ಪದಕ್ಕೆ ‘ದುಷ್ಟ’ ಎನ್ನುವ ಅರ್ಥವಿದೆ. ಹೊಲೆಯ ಪದ ಒಂದು ಸಮುದಾಯದ ಸೂಚಕವಾಗಿದೆ. ಯಾವುದೋ ಸಂದರ್ಭದಲ್ಲಿ ಈ ತಪ್ಪಾಗಿದೆ. ಇದರಿಂದ ಸಮುದಾಯಕ್ಕೆ ನೋವುಂಟಾಗಿದೆ. ಇದಕ್ಕಾಗಿ ನಾನು ಬೇಷರತ್ ಕ್ಷಮೆ ಯಾಚಿಸುತ್ತೇನೆ ಎಂದು ಹಾಲಂಬಿ ಹೇಳಿದರು.
ಜತೆಗೆ, ಮುಂದಿನ ಪರಿಷ್ಕೃತ ಮುದ್ರಣದಲ್ಲಿ ಈ ಪದವನ್ನು ಕೈಬಿಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಸಮಾವೇಶ ಉದ್ಘಾಟಿಸಿದರು. ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಲೇಖಕಿ ಡಾ.ಲತಾ ರಾಜಶೇಖರ್, ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ನಗರಸಭೆ ಅಧ್ಯಕ್ಷ ಎಸ್. ನಂಜುಂಡಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.