ಬೆಂಗಳೂರು: ಹಿರಿಯ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ (81) ಅವರು ಶುಕ್ರವಾರ ಸಂಜೆ ನಿಧನರಾದರು.
ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಚಿಕಿತ್ಸೆಗಾಗಿ ಅವರನ್ನು ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಎರಡೂ ಕಿಡ್ನಿಗಳೂ ಕೆಲಸ ಮಾಡುತ್ತಿರಲಿಲ್ಲ. ಜತೆಗೆ ಹೃದಯ ಮತ್ತು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ರಜೆ ಘೋಷಣೆ
ಸಾಹಿತಿ ಯು.ಆರ್. ಅನಂತಮೂರ್ತಿ ವಿಧಿವಶರಾದ ಕಾರಣ ಅವರ ಗೌರವಾರ್ಥವಾಗಿ ರಾಜ್ಯ ಸರ್ಕಾರ ಶನಿವಾರ ರಜೆ ಘೋಷಿಸಿದೆ. ಸರ್ಕಾರಿ ಕಚೇರಿ, ಶಾಲೆ– ಕಾಲೇಜುಗಳಿಗೆ ಶನಿವಾರ ರಜೆ ಇರಲಿದೆ. ರಾಜ್ಯದ್ಯಾಂತ 3 ದಿನಗಳ ಕಾಲ ಶೋಕಾಚರಣೆ ಜಾರಿಯಲ್ಲಿರಲಿದೆ.