ಕೋಲ್ಕತ್ತ (ಪಿಟಿಐ): ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿ ರುವ ಕಾರಣ ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ವಾರ್ಷಿಕ ಮಹಾಸಭೆ ಮುಂದೂಡುವ ಸಾಧ್ಯತೆಯಿದೆ.
ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಇಲ್ಲಿನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ‘ಕಾನೂನು ಪರಿಣಿತರಿಂದ ಸಲಹೆ ಪಡೆದು ವಾರ್ಷಿಕ ಮಹಾಸಭೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಲೋಧಾ ಸಮಿತಿಯ ಶಿಫಾರಸನ್ನು ಜಾರಿಗೆ ತರುವ ಬಗ್ಗೆಯೂ ಚರ್ಚಿಸುತ್ತೇವೆ’ ಎಂದು ಗಂಗೂಲಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಒಂದು ರಾಜ್ಯದಿಂದ ಒಬ್ಬರಿಗಷ್ಟೇ ಮತದಾನದ ಹಕ್ಕು, 70 ವರ್ಷ ಮೇಲ್ಪಟ್ಟವರು ಬಿಸಿಸಿಐ ಆಡಳಿತದಲ್ಲಿ ಇರುವಂತಿಲ್ಲ ಎನ್ನುವ ಪ್ರಮುಖ ಶಿಫಾರುಸಗಳನ್ನು ಲೋಧಾ ಸಮಿತಿ ಮಾಡಿತ್ತು. ಇವುಗಳಿಗೆ ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ. ಜೊತೆಗೆ ಬಿಸಿಸಿಐಗೆ ಆರು ತಿಂಗಳು ಕಾಲಾವಕಾಶ ಕೊಟ್ಟಿದೆ.
‘ಬೇರೆ ಕ್ರೀಡಾ ಸಂಸ್ಥೆಗಳಲ್ಲಿ 70 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾದವರು ಇದ್ದಾರೆ. ಹೊಸ ನಿಯಮ ಕ್ರಿಕೆಟ್ ಮಾತ್ರ ಏಕೆ’ ಎಂದು ಬಂಗಾಳ ಸಂಸ್ಥೆಯ ಖಜಾಂಚಿ ಬಿಸ್ವರೂಪ್ ಡೇ ಪ್ರಶ್ನಿಸಿದ್ದಾರೆ.