ಮುಂಬೈ (ಪಿಟಿಐ): ಭಕ್ತಾದಿಗಳು ಷೇರು ಮತ್ತು ಸಾಲಪತ್ರಗಳನ್ನು ದೇಣಿಗೆ ನೀಡುವುದಕ್ಕೆ ನೆರವಾಗಲು ಇಲ್ಲಿಯ ಸಿದ್ಧಿವಿನಾಯಕ ಗಣಪತಿ ದೇವಸ್ಥಾನವು ಡಿಮ್ಯಾಟ್ ಖಾತೆ ಆರಂಭಿಸಿದೆ.
ಎಸ್ಬಿಐ ಕ್ಯಾಪ್ ಸೆಕ್ಯುರಿಟೀಸ್ ಲಿಮಿಟೆಡ್ನಲ್ಲಿ ‘ಶ್ರೀ ಸಿದ್ಧಿವಿನಾಯಕ ಗಣಪತಿ ಟೆಂಪಲ್ ಟ್ರಸ್ಟ್ (ಪ್ರಭಾದೇವಿ) ಮುಂಬೈ, ಹೆಸರಿನಲ್ಲಿ ಈ ಖಾತೆ ತೆರೆಯಲಾಗಿದೆ.
ಭಕ್ತಾದಿಗಳು ದೇಣಿಗೆ ನೀಡುವ ನಗದು ಮತ್ತು ಚಿನ್ನಾಭರಣಗಳಿಂದಾಗಿ ಇದು, ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.
ತಿರುಮಲ ತಿರುಪತಿ ದೇವಸ್ಥಾನವು ಈಗಾಗಲೇ ಇಂತಹ ಡಿಮ್ಯಾಟ್ ಖಾತೆ ತೆರೆದಿದೆ. ಇದಕ್ಕೆ ಭಕ್ತಾದಿಗಳಿಂದ ಉತ್ತೇಜಕರ ಪ್ರತಿಕ್ರಿಯೆ ದೊರೆತಿದೆ.
ಷೇರುಪೇಟೆಯಲ್ಲಿ ಚಲಾವಣೆಯಲ್ಲಿ ಇರುವ ಷೇರು ಅಥವಾ ಸಾಲಪತ್ರಗಳನ್ನು ಭಕ್ತರು ಈ ಖಾತೆ ಮೂಲಕ ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಬಹುದು ಎಂದು ‘ಸಿಡಿಸಿಎಲ್’ನ ವ್ಯವಸ್ಥಾಪಕ ನಿರ್ದೇಶಕ ಪಿ. ಎಸ್. ರೆಡ್ಡಿ ತಿಳಿಸಿದ್ದಾರೆ.