ಬೆಂಗಳೂರು: ಇತ್ತೀಚೆಗೆ ಪಕ್ಷದಲ್ಲಿ ಕಂಡು ಬಂದಿರುವ ಅಸಮಾಧಾನ, ಭಿನ್ನಮತದ ಬಗ್ಗೆ ಮುಕ್ತವಾಗಿ ಚರ್ಚಿಸಲು ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ಅವರು ಸೆ.3ರಂದು ಪಕ್ಷದ ಶಾಸಕರ ಸಭೆ ಕರೆದಿದ್ದಾರೆ.
‘ಗೌರಿ–ಗಣೇಶ’ ಹಬ್ಬಕ್ಕೆ ಶುಭಾಶಯ ಕೋರುವ ನೆಪದಲ್ಲಿ ಎರಡು ಪುಟಗಳ ಭಾವನಾತ್ಮಕ ಪತ್ರ ಬರೆದಿರುವ ಅವರು, ‘ಯಾವುದೇ ಪೂರ್ವಗ್ರಹ, ಹಿಂಜರಿಕೆ ಇಲ್ಲದೆ ಮುಕ್ತ ವಾತಾರಣದಲ್ಲಿ ಎಲ್ಲಾ ವಿಷಯಗಳನ್ನು ಚರ್ಚಿ-ಸೋಣ’ ಎಂದು ಶಾಸಕರಿಗೆ ಆಹ್ವಾನ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳು ತಮ್ಮನ್ನು ಖಿನ್ನತೆಗೆ ದೂಡಿರುವುದು ಮಾತ್ರವಲ್ಲದೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿವೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
‘ಪಕ್ಷದಲ್ಲಿ ಮೇಲಿಂದ ಮೇಲೆ ಬರುತ್ತಿರುವ ಅಪಸ್ವರಗಳು ನನಗಿಂತಲೂ ಪಕ್ಷದ ಕಾರ್ಯಕರ್ತರನ್ನು ಆತಂಕಕ್ಕೆ ನೂಕಿವೆ. ಅಧಿಕಾರದ ಕುರ್ಚಿಯ ಕಾಲುಗಳೇ ಕಾರ್ಯಕರ್ತರು. ಇಂತಹ ಕಾಲುಗಳನ್ನು ಮುರಿಯುವ ಬದಲಿಗೆ ಬೆಸೆಯುವ ಕೆಲಸವಾಗಬೇಕು. ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು’ ಎಂದು ಅವರು ಬರೆದಿದ್ದಾರೆ. ಸೆಪ್ಟೆಂಬರ್ 3ರಂದು ಬೆಂಗಳೂರಿನ ಚಾನ್ಸೆರಿ ಪೆವಿಲಿಯನ್ ಹೋಟೆಲ್ನಲ್ಲಿ ಈ ಸಭೆ ನಡೆಯಲಿದೆ.