ಮಾಗಡಿ: ‘ಮಾಗಡಿ ವಿಧಾನ ಸಭಾ ಕ್ಷೇತ್ರದ ಮತದಾರರು ನನ್ನ ಮೇಲೆ ಇಟ್ಟಿರುವ ಅಚಲವಾದ ನಂಬಿಕೆಯಿಂದ ಹಾಗೂ ನಮ್ಮ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುತ್ತಿದ್ದೇನೆ’ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ನುಡಿದರು.
ಪುರಸಭೆಯ 20,21ನೇ ವಾರ್ಡುಗಳಿಗೆ ಮಂಗಳವಾರ ಭೇಟಿ ನೀಡಿ ನಾಗರಿಕರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.
ಕಂಡವರ ಹಣ ನಂಬಿಕೊಂಡು ರಾಜಕೀಯ ಮಾಡುವುದಿಲ್ಲ. ವಿಧಾನ ಸಭೆಗೆ ಮೂರು ಬಾರಿ ಜೆಡಿಎಸ್ ಪಕ್ಷದಿಂದ ಚುನಾವಣೆ ಎದುರಿಸಿದ್ದು ಎಚ್.ಡಿ.ಕುಮಾರಸ್ವಾಮಿ ಎಷ್ಟೆಷ್ಟು ಕೋಟಿ ಹಣ ನೀಡಿ ಚುನಾವಣೆ ಮಾಡಿದ್ದಾರೆ ಎಂಬುದನ್ನು ಮತದಾರರ ಮುಂದಿಡಬೇಕು ಎಂದರು.
ಮಾಗಡಿ ಪುರಸಭೆ ಅಧಿಕಾರವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ 2 ವರ್ಷ ಅಧಿಕಾರ ಮಾಡಿದ್ದಾರೆ. ಅವರ ಅಧಿಕಾರ ಮಾಡುವಾಗ ನಾವು ಮಧ್ಯ ಪ್ರವೇಶಿಸುವುದು ಬೇಡ ಎಂದು ಇಲ್ಲಿಯವರೆಗೂ ಕಾದಿದ್ದೇವು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ಅವರು ಪುರಸಭೆ ಅಧ್ಯಕ್ಷ ಚುನಾವಣೆ ವೇಳೆ ಪ್ರತಿ ವಾರ್ಡಿಗೂ ₹ 30 ಲಕ್ಷ ಬಿಎಂಆರ್ಡಿ ಯಿಂದ ನೀಡುವುದಾಗಿ ಹೇಳಿದ್ದಾರೆ. ಇನ್ನೆರಡು ತಿಂಗಳ ಒಳಗಾಗಿ ಬಿಡುಗಡೆ ಮಾಡಿಸಿದರೆ ಮತ್ತಷ್ಟು ಅಭಿವೃದ್ದಿ ಮಾಡಲು ಸಹಕಾರಿಯಾಗಲಿದೆ ಎಂದು ಶಾಸಕರು ಮನವಿ ಮಾಡಿದರು.
ಪುರಸಭೆ ಸದಸ್ಯರಾದ ನಿರ್ಮಲಾ ಸೀತಾರಾಮು, ಎಂ.ನಾಗೇಂದ್ರ, ರಘು, ಶಿವರುದ್ರಮ್ಮ, ರಿಯಾಜ್, ಪುರಸಭೆ ಮುಖ್ಯಾಧಿಕಾರಿ ಚಂದ್ರಬಾಬು ಮತ್ತಿತರರು ಇದ್ದರು.