ಕಳೆದ ವಾರ ಕಾಸರಗೋಡು ಜಿಲ್ಲೆಯ ಪ್ರಸಿದ್ಧ ದೇವಸ್ಥಾನವೊಂದಕ್ಕೆ ಹೋಗಿದ್ದೆ. ಪ್ರಾರ್ಥನೆ ಮುಗಿಸಿ ಅಲ್ಲಿಯೇ ಇದ್ದ ಮಹಿಳಾ ಶೌಚಾಲಯಕ್ಕೆ ಹೋದೆ. ಒಟ್ಟು ಎರಡು ಶೌಚಾಲಯಗಳಿದ್ದವು. ಒಂದರಲ್ಲಿ ಬಕೆಟ್ ಇರಲಿಲ್ಲ. ಇನ್ನೊಂದರಲ್ಲಿ ಬಕೆಟ್ ಇದ್ದರೂ ನಲ್ಲಿ ಸರಿ ಇರಲಿಲ್ಲ. ಮೋದಿಯವರ ‘ಸ್ವಚ್ಛ ಭಾರತ ಅಭಿಯಾನ’ವನ್ನು ಇಲ್ಲಿಂದಲೇ ಶುರು ಮಾಡೋಣ ಎಂದುಕೊಂಡು ದೇವಸ್ಥಾನದ ಆಡಳಿತ ಮಂಡಳಿಯವರನ್ನು ಹುಡುಕಿಕೊಂಡು ಹೊರಟೆ.
ಅಲ್ಲೇ ಒಬ್ಬರು ಏನೋ ಲೆಕ್ಕ ಬರೆಯುತ್ತ ಕೋಣೆಯಲ್ಲಿ ಕುಳಿತಿದ್ದರು. ಸಮಸ್ಯೆಯನ್ನು ಅವರ ಮುಂದಿಟ್ಟೆ. ‘ಬಕೆಟ್ ಮತ್ತು ನಲ್ಲಿ ಸರಿ ಇಲ್ಲದಿದ್ದರೆ ಶೌಚಾಲಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹೇಗೆ?’ ಎಂದು ಕೇಳಿದೆ. ಅವರು ‘ಇದು ನನಗೆ ಸಂಬಂಧಿಸಿದ್ದಲ್ಲ. ಓ ಅಲ್ಲಿ ದೇವಸ್ಥಾನದ ಮ್ಯಾನೇಜರ್ ಇದ್ದಾರೆ. ಅವರನ್ನು ವಿಚಾರಿಸಿ’ ಎಂದರು. ಅವರನ್ನು ಕೇಳಿದಾಗ ಅವರು ‘ನನಗೆ ಗೊತ್ತೇ ಇರಲಿಲ್ಲ. ಬಕೆಟ್ ಇಡುವುದು, ಹೊಸ ಟ್ಯಾಪ್ ಹಾಕುವುದು ಯಾವ ದೊಡ್ಡ ವಿಷಯ? ಇಂದೇ ಮಾಡಿಸುತ್ತೇನೆ. ಆದರೆ ಶೌಚಾಲಯ ಸ್ವಚ್ಛ ಮಾಡುವ ಹೆಂಗಸು ಈ ವಿಷಯವನ್ನು ನನ್ನ ಗಮನಕ್ಕೆ ತರಲೇ ಇಲ್ಲ’ ಎಂದರು.
ನಾನು ಪಟ್ಟು ಬಿಡದೆ ಆ ಹೆಂಗಸನ್ನೂ ಕಂಡು ಅವಳಲ್ಲಿ ಕೇಳಿದೆ. ಅವಳು ಹೇಳಿದ್ದು ಇಷ್ಟು: ‘ಬಕೆಟ್ ಇಲ್ಲದೆ, ಟ್ಯಾಪ್ ಹಾಳಾಗಿ ತಿಂಗಳುಗಳೇ ಕಳೆದಿವೆ. ಒಂದು ಶೌಚಾಲಯಕ್ಕೆ ಚಿಲಕವೂ ಇಲ್ಲ. ಗಂಡಸರ ಶೌಚಾಲಯದಲ್ಲೂ ಇದೇ ಸ್ಥಿತಿ. ನನಗೆ ಮೇಲಿನವರಲ್ಲಿ ಹೇಳಿ ಹೇಳಿ ಸಾಕಾಯಿತು. ನನ್ನ ಕರ್ತವ್ಯ ನಾನು ಮಾಡಿದ್ದೇನೆ’. ಕೊನೆಗೆ ದೇವಾಲಯದ ಒಳಹೊಕ್ಕು ಪುನಃ ಪ್ರಾರ್ಥನೆ ಮಾಡಿದೆ ‘ದೇವಾ, ನಿನ್ನ ಸನ್ನಿಧಾನದಲ್ಲಿರುವ ಶೌಚಾಲಯಕ್ಕೆ ಆದಷ್ಟು ಬೇಗ ಬಕೆಟ್ ಮತ್ತು ಹೊಸ ಟ್ಯಾಪ್ ಕರುಣಿಸು. ಬೇರೇನೂ ಬೇಡ’.
ನಿತ್ಯವೂ ಸಾವಿರದಷ್ಟು ಸಂಖ್ಯೆಯಲ್ಲಿ ಜನ ಭೇಟಿ ನೀಡುವ ಒಂದು ದೇವಸ್ಥಾನದ ಶೌಚಾಲಯದ ಪರಿಸ್ಥಿತಿಯೇ ಇಷ್ಟು ಹದಗೆಟ್ಟಿರುವಾಗ ಇನ್ನು ಬೇರೆ ಸಾರ್ವಜನಿಕ ಶೌಚಾಲಯಗಳ ಗತಿ ಹೇಗಿರಬಹುದು? ಭಕ್ತರು ಹುಂಡಿಗೆ ಹಾಕುವ ಹಣದಲ್ಲಿ ಒಂದಂಶವನ್ನಾದರೂ ಸ್ವಚ್ಛತೆಗಾಗಿ ವಿನಿಯೋಗಿಸದ ದೇವಸ್ಥಾನದ ಕಾರ್ಯವೈಖರಿ ಬೇಸರ ತರಿಸಿತು. ‘ಸ್ವಚ್ಛ ಶೌಚಾಲಯ ಅಭಿಯಾನ’ವೂ ಆರಂಭವಾದರೆ?
–-ಸಹನಾ ಕಾಂತಬೈಲು, ಮಡಿಕೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.