ಇದು ಸ್ವಾಮೀಜಿಗಳ ಕಾಲವೆನಿಸುತ್ತಿದೆ. ಒಬ್ಬರು ಸ್ವಾಮಿಗಳು ಕೊಲೆ ಆಪಾದನೆಗೆ ಸಿಲುಕಿ ಇತ್ತೀಚೆಗಷ್ಟೆ ಅತ್ಯುಚ್ಚ ನ್ಯಾಯಾಲಯದಿಂದ ಬಿಡುಗಡೆಯ ನೆಮ್ಮದಿ ಪಡೆದಿದ್ದಾರೆ. ಇನ್ನೊಬ್ಬರು ಸ್ವಾಮಿಗಳು ಅತ್ಯಾಚಾರದ ಆರೋಪ ಹೊತ್ತು ಪೊಲೀಸ್ ಸ್ಟೇಷನ್ಗೆ ಅಡ್ಡಾಡುತ್ತಿದ್ದಾರೆ. ಒಂದು ಮಠದಲ್ಲಿ ಸ್ವಾಮಿಗಳ ಪೀಠ ತ್ಯಾಗ ಮತ್ತು ಹೊಸ ಸ್ವಾಮಿಗಳ ನೇಮಕಾತಿ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಶೀಘ್ರ ಬಗೆಹರಿಯುವ ಲಕ್ಷಣಗಳಿಲ್ಲ ಮತ್ತು ನ್ಯಾಯಾಲಯದ ಮೆಟ್ಟಿಲು ಹತ್ತಿದರೂ ಹತ್ತಬಹುದು.
ಹಾಗೆಯೇ ಒಬ್ಬರು ಸ್ವಾಮಿಗಳು ಇನ್ನೊಬ್ಬರನ್ನು ದೇವರಲ್ಲವೆಂದು, ದೇವದೂತರಲ್ಲ ಎಂದು ಹೇಳುವುದು, ಇನ್ನೊಬ್ಬರು, ಹಿಂದೂಧರ್ಮದ ಬದಲಿಗೆ ತಮ್ಮ ಪಂಥದ ದೀಕ್ಷೆಯನ್ನು ಕೊಡುವುದಾಗಿ ಹೇಳಿರುವುದು, ಇವೆಲ್ಲಾ ವಿದ್ಯಮಾನಗಳು ಹಿಂದೂ ಧರ್ಮವನ್ನು ನಂಬಿಕೊಂಡು ಬಂದವರಿಗೆ ಒಂದು ರೀತಿ ಮುಜುಗರ ಉಂಟು ಮಾಡುತ್ತಿವೆ.
ಸ್ವಾಮಿ ನಿತ್ಯಾನಂದ, ಬಾಬಾ ಅಸಾರಾಂ, ಬಾಬಾ ರಾಮ್ಪಾಲ್ ಅವರು ಹಿಂದೂ ಧರ್ಮಕ್ಕೆ ಅಳಿಸಲಾರದ ಕಪ್ಪುಚುಕ್ಕೆಯಾಗಿದ್ದಾರೆ.
ಸಾವಿರಾರು ವರ್ಷಗಳಷ್ಟು ಹಳೆಯದಾದ ಹಿಂದೂ ಧರ್ಮವನ್ನು ರಕ್ಷಿಸುವ, ಪಸರಿಸುವ, ಉಳಿಸುವ ಮತ್ತು ಜನರು ಸಜ್ಜನರಾಗಿರುವಂತೆ ಮಾರ್ಗದರ್ಶನ ಮಾಡುವ ಮಹತ್ತರ ಜವಾಬ್ದಾರಿ ಈ ಧಾರ್ಮಿಕ ಪೀಠಗಳ ಮೇಲೆ ಹಾಗೂ ಅದರ ಸ್ವಾಮಿಗಳ ಮೇಲೆ ಇದೆ. ಇವರ ಕಾರ್ಯವೈಖರಿಯಲ್ಲಿ ಕಿಂಚಿತ್ ಲೋಪವಾದರೂ, ಅದು ಇಡೀ ಹಿಂದೂ ಸಮಾಜಕ್ಕೆ ಮತ್ತು ಧರ್ಮಕ್ಕೆ ಆದ ಗಾಯವೇ ಸರಿ.
ಇಲ್ಲಿಯವರೆಗೆ ಕೆಲವು ರಾಜಕಾರಣಿಗಳಿಂದ, ಪಾಶ್ಚಾತ್ಯ ದೇಶಗಳ ಸಂಸ್ಕೃತಿಗೆ ಮಾರುಹೋಗಿರುವ ಯುವ ಜನಾಂಗದಿಂದ, ವಿದೇಶಿ ಧರ್ಮ ಪ್ರಚಾರಕರಿಂದ, ಸೋಗಲಾಡಿ ಬುದ್ಧಿಜೀವಿಗಳಿಂದ ಮತ್ತು ಜಾತ್ಯತೀತವಾದಿಗಳಿಂದ ಹಿಂದೂ ಧರ್ಮ ಪರೋಕ್ಷವಾಗಿ ಪೆಟ್ಟು ತಿನ್ನುತ್ತಿತ್ತು. ಅದಕ್ಕೆ ಹಿಂದೂ ಧರ್ಮದ ಕೆಲವು ಸ್ವಾಮಿಗಳ ಕೊಡುಗೆಯೂ ಈಗ ಸೇರಿಕೊಂಡಿದೆ. ಸ್ವಾಮಿಗಳು ಹಿಂದೂ ಧರ್ಮಕ್ಕೆ ವಿಶಾಲವಾದ ತಳಹದಿ ನೀಡಲು ಮತ್ತು ಏಕರೂಪದ ಸಂಹಿತೆ ರೂಪಿಸಲು ಕಾರ್ಯೋನ್ಮುಖರಾಗಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.