ಹುಬ್ಬಳ್ಳಿ: ನಗರದಲ್ಲಿ ಹಂದಿಗಳನ್ನು ಹಿಡಿದು ಸ್ಥಳಂತರಿಸುವ ಕಾರ್ಯಾಚರಣೆ ಶುಕ್ರವಾರ ಪುನರಾರಂಭಗೊಂಡಿತು. ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ, ರಾಮನಗರ, ಪ್ರಕಾಶ ಕಾಲೊನಿ, ಶಿವಗಂಗಾ ಲೇಔಟ್ ಹಾಗೂ ರೈಲ್ವೆ ಕ್ವಾರ್ಟರ್ಸ್್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಮಕೂರಿನಿಂದ ಬಂದಿದ್ದ ತಂಡ ಹಂದಿಗಳನ್ನು ಹಿಡಿಯಿತು.
ಶುಕ್ರವಾರ ನಡೆದ ಕಾರ್ಯಾಚರಣೆಯಲ್ಲಿ 140ಕ್ಕೂ ಅಧಿಕ ಹಂದಿಗಳನ್ನು ಹಿಡಿದು, ಸಾಗಿಸಲಾಗಿದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಪ್ರಭು ಬಿರಾದಾರ ತಿಳಿಸಿದರು.
‘ಕಾರ್ಯಾಚರಣೆ ಆರಂಭಗೊಂಡಾಗಿನಿಂದ ಈ ವರೆಗೆ 3,000ಕ್ಕೂ ಅಧಿಕ ಹಂದಿಗಳನ್ನು ಹಿಡಿಯಲಾಗಿದೆ. ನಾಳೆಯೂ (ಸೆ. 20) ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಹೇಳಿದರು.
ಕಾರ್ಯಾಚರಣೆ ನಡೆಸಿದ ತಂಡಕ್ಕೆ ಭದ್ರತೆ ಒದಗಿಸುವ ದೃಷ್ಟಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಅನಧಿಕೃತ ಸಾಕಾಣಿಕೆ?: ರೈಲ್ವೆ ಕ್ವಾರ್ಟರ್ಸ್ನಲ್ಲಿ ಖಾಲಿ ಬಿದ್ದಿರುವ ಹಲವಾರು ಮನೆಗಳಲ್ಲಿ 100ಕ್ಕೂ ಅಧಿಕ ಹಂದಿಗಳನ್ನು ಕೂಡಿ ಹಾಕಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಡಾ.ಪ್ರಭು ಬಿರಾದಾರ, ‘ನೂರಾರು ಸಂಖ್ಯೆಗಳಲ್ಲಿ ಹಂದಿಗಳನ್ನು ಅನಧಿಕೃತವಾಗಿ ಕೂಡಿ ಹಾಕಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳಿಗೂ ತಿಳಿಸಲಾಗಿದೆ. ಆದರೆ, ಈ ಹಂದಿಗಳನ್ನು ಹಿಡಿದು ಸಾಗಿಸಲು ಪಾಲಿಕೆ ನಿಯೋಜಿಸಿರುವ ತಂಡಕ್ಕೆ ಅನುಮತಿ ನೀಡಲು ರೈಲ್ವೆ ಅಧಿಕಾರಿಗಳು ಸಮ್ಮತಿಸಲಿಲ್ಲ’ ಎಂದರು.
‘ಹಂದಿಗಳನ್ನು ಹೊರಗೆ ಸಾಗಿಸಲು ರೈಲ್ವೆ ಅಧಿಕಾರಿಗಳು ಸೂಚಿಸಿದರೂ ಹಂದಿಗಳ ಮಾಲೀಕರು ಈ ಕುರಿತು ಏನೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ನಾಳೆ ಮತ್ತೊಮ್ಮೆ ರೈಲ್ವೆ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಇದೇ ರೀತಿ ಒಂದು ದೊಡ್ಡ ಪ್ರದೇಶಗಳಲ್ಲಿ ಹಂದಿಗಳನ್ನು ಅನಧಿಕೃತವಾಗಿ ಕೂಡಿ ಹಾಕುತ್ತಿರುವುದು ಆನಂದನಗರ ಮತ್ತು ಗುಡಿಹಾಳ ರಸ್ತೆಯಲ್ಲಿ ಸಹ ಕಂಡು ಬಂದಿದೆ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.