‘ಪುಟಾಣಿ ರಂಗನತಿಟ್ಟು’ ಎನ್ನುವ ಹಿರಿಮೆಗೆ ಪಾತ್ರವಾದ ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನಹಳ್ಳಿಯಲ್ಲಿ ಬಾನಾಡಿಗಳ ತುಂಟಾಟವನ್ನು ನೋಡಲು ಪಕ್ಷಿಪ್ರಿಯರು ಧಾವಿಸುವ ಸಮಯ ಇದು. ಕಿಂಗ್ ಫಿಷರ್, ರಿವರ್ ಟರ್ನ್, ನೊಣಬಾಕ, ಮುನಿಯ, ಗುಬ್ಬಿ ಮೊದಲಾದ ಗಗನ ಸುಂದರಿಯರು ಫೆಬ್ರುವರಿಯಿಂದ ಮೇ ತಿಂಗಳವರೆಗೆ ಕಾವೇರಿ ತಟದ ಈ ಪರಿಸರದಲ್ಲಿ ಮುದ್ದು ಮರಿಗಳಿಗೆ ಜನ್ಮನೀಡಿ ಬಾಣಂತನದ ಸುಖ ಅನುಭವಿಸಲು ಠಿಕಾಣಿ ಹೂಡುತ್ತವೆ.
ಕಾವೇರಿ ನೀರಾವರಿ ನಿಗಮ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದು, ಕಲ್ಲು–ಮಣ್ಣು ತಂದು ಸುರಿಯಲಾಗುತ್ತಿದೆ. ವಾಹನಗಳ ಓಡಾಟ, ಹೊಲಗಳಿಗೆ ನೀರೆತ್ತಲು ಬಳಕೆ ಮಾಡುವ ಜನರೇಟರ್ಗಳ ಸದ್ದು ಹಾಗೂ ಬಟ್ಟೆ ತೊಳೆದು ಗೂಡಿನ ಮೇಲೇ ಒಣ ಹಾಕುವ ಪ್ರವೃತ್ತಿಗೆ ಬೆಚ್ಚಿಬಿದ್ದಿರುವ ಪುಟ್ಟ ಹಕ್ಕಿಗಳು, ಸಂತಾನಾಭಿವೃದ್ಧಿ ಕ್ರಿಯೆಯಲ್ಲಿ ಪಾಲ್ಗೊಳ್ಳಲಾಗದೆ ಈ ಪ್ರದೇಶದಿಂದ ದೂರವಾಗಿವೆ. ಎಲ್ಲೋ ಒಂದಿಷ್ಟು ನೊಣಬಾಕಗಳು ಮಾತ್ರ ಕಾಣಸಿಗುತ್ತವೆ. ಮೇ ತಿಂಗಳು ಮುಗಿಯುವವರೆಗೆ ಸೇತುವೆ ಕಾಮಗಾರಿ ನಿಲ್ಲಿಸಬೇಕು ಎನ್ನುವುದು ಪಕ್ಷಿಪ್ರಿಯರ ಆಗ್ರಹವಾಗಿದೆ.