ಚಂಡೀಗಡ: ಹರಿಯಾಣದಲ್ಲಿ ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವನ್ನು ನೆಲಕಚ್ಚಿಸುವ ಮೂಲಕ ಬಿಜೆಪಿ ಈ ರಾಜ್ಯದ ಚುನಾವಣಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ೯೦ ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ೪೭ ಸ್ಥಾನಗಳಲ್ಲಿ ಜಯಗಳಿಸಿದೆ. ಇದೇ ಮೊದಲ ಬಾರಿ ಪಕ್ಷವು ಇಲ್ಲಿ ಮಿತ್ರಪಕ್ಷಗಳ ಬೆಂಬಲವಿಲ್ಲದೇ ಸ್ವಂತ ಬಲದಿಂದ ಸರ್ಕಾರ ರಚಿಸಲಿದೆ.
ಐದು ವರ್ಷಗಳ ಹಿಂದಿನವರೆಗೂ ಕೇವಲ ಶೇ ೯ರಷ್ಟು ಮತ ಬೆಂಬಲ ಪಡೆಯಲು ಹೆಣಗಾಡಿದ್ದ ಪಕ್ಷವು ಈ ಸಲ ಶೇ ೩೩.೨ಕ್ಕಿಂತಲೂ ಹೆಚ್ಚು ಮತಗಳನ್ನು ಪಡೆಯುವಲ್ಲಿ ಯಶ ಕಂಡಿದೆ. ಇದು ಮೋದಿ ಅಲೆಯ ಪರಿಣಾಮ. ಮೋದಿ ಕೇಂದ್ರಿತ ಬಿಜೆಪಿ ಚುನಾವಣಾ ಪ್ರಚಾರದಿಂದಾಗಿ ನಗರ ಪ್ರದೇಶದ ಮತಗಳು ದೊಡ್ಡ ಸಂಖ್ಯೆಯಲ್ಲಿ ಧ್ರುವೀಕರಣಗೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ವರದಾನವಾಯಿತು. ಬಹುಸಂಖ್ಯಾತ ಜಾಟರ ಮತ ವಿಭಜನೆ ಕೂಡ ಪಕ್ಷಕ್ಕೆ ಲಾಭವಾಯಿತು.
ಹರಿಯಾಣದಲ್ಲಿ ಸಿಖ್ಖರ ಓಲೈಕೆಗೆ ಕಾಂಗ್ರೆಸ್ ಮಾಡಿದ್ದ ಕಾರ್ಯತಂತ್ರ ಕೈಗೂಡಲಿಲ್ಲ. ಗುರುದ್ವಾರ ನಿರ್ವಹಣೆಗೆ ಪ್ರತ್ಯೇಕ ಸಮಿತಿ ರಚಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಇದುವರೆವಿಗೂ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಐಎನ್ಎಲ್ಡಿ ಸಾಂಪ್ರದಾಯಿಕ ಎದುರಾಳಿಗಳಾಗಿದ್ದವು. ಇದೇ ಮೊದಲ ಸಲ ಬಿಜೆಪಿಯು ಮತದಾರರಿಗೆ ಪರ್ಯಾಯ ಆಯ್ಕೆಯಾಗಿ ಕಂಡಿದೆ.
ಮೋದಿ ಅಲೆಯ ಜತೆಗೆ ದಶಕಗಳ ಆಡಳಿತ ವಿರೋಧಿ ಅಲೆ ಹಾಗೂ ಭೂಹಗರಣಗಳ ಕಳಂಕಗಳು ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಕಾರಣವಾದವು. ಇದರಿಂದಾಗಿ ಪಕ್ಷದ ಬಲ ಹಿಂದಿದ್ದ ೪೦ರಿಂದ ಕೇವಲ ೧೫ಕ್ಕೆ ಇಳಿದಿದೆ.
ಮೋದಿ ಅಲೆ ಇದ್ದರೂ ಸುಷ್ಮಾ ಸ್ವರಾಜ್ ಅವರ ಸಹೋದರಿ ವಂದನಾ ಶರ್ಮಾ ಅವರು ಸಫಿದಾನ್ ಕ್ಷೇತ್ರದಲ್ಲಿ ಸೋಲು ಕಂಡಿರುವುದು ವಿಪರ್ಯಾಸ. ಈ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಜಸ್ಬೀರ್ ದೇಸ್ವಾಲ್ ಪಾಲಾಗಿದೆ. ಹರಿಯಾಣದಲ್ಲಿ ಪ್ರಮುಖ ವಿರೋಧ-ಪಕ್ಷವಾಗಿರುವ ಐಎನ್ಎಲ್ಡಿ ಸ್ಥಿತಿ ಕೂಡ ಕಾಂಗ್ರೆಸ್ಗಿಂತ ಭಿನ್ನವಿಲ್ಲ. ೨೦೦೯ರ ಚುನಾವಣೆಯಲ್ಲಿ ೩೧ ಸ್ಥಾನ ಗಳಿಸಿದ್ದ ಪಕ್ಷ ಈ ಬಾರಿ ೧೯ ಸ್ಥಾನಗಳಿಗೆ ಸಮಾಧಾನಪಟ್ಟುಕೊಳ್ಳಬೇಕಾಗಿದೆ. ಹತ್ತು ವರ್ಷಗಳಿಂದ ಅಧಿಕಾರ ವಂಚಿತವಾಗಿರುವ ಈ ಪಕ್ಷದ ಪ್ರಸ್ತುತತೆಯೇ ಈಗ ಪ್ರಶ್ನೆಗೆ ಒಳಪಟ್ಟಿದೆ.
ಜೈಲಿನಲ್ಲಿರುವ ತನ್ನ ಮುಖಂಡ ಓಂ ಪ್ರಕಾಶ್ ಚೌತಾಲಾ ಹೆಸರು ಮುಂದಿಟ್ಟುಕೊಂಡು ಅನುಕಂಪದ ಅಲೆಯ ಮೇಲೆ ಲಾಭ ಪಡೆಯಬೇಕೆನ್ನುವುದು ಪಕ್ಷದ ಕಾರ್ಯತಂತ್ರವಾಗಿತ್ತು. ಆದರೆ ಆ ಲೆಕ್ಕಾಚಾರ ಬುಡಮೇಲಾಗಿದೆ. ಚೌತಾಲಾ ಅವರ ಮೊಮ್ಮಗ ದುಷ್ಯಂತ್ ಚೌತಾಲಾ ಹಾಗೂ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಅಶೋಕ್ ಅರೋರಾ ಸೇರಿದಂತೆ ಘಟಾನುಘಟಿ ಮುಖಂಡರೆಲ್ಲ ಸೋತಿರುವುದು ಪಕ್ಷಕ್ಕೆ ತೀವ್ರ ಹೊಡೆತ ನೀಡಿದೆ. ಕುಲ್ದೀಪ್ ಬಿಷ್ಣೋಯಿ ನೇತೃತ್ವದ ಹರಿಯಾಣ ಜನಹಿತ ಕಾಂಗ್ರೆಸ್ ಪಕ್ಷವನ್ನೂ (ಎಚ್ಜೆಸಿ) ಮತದಾರರು ತಿರಸ್ಕರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.