ಜಾತಿ ಮೀಸಲಾತಿಯಿಂದ ಸಿಗುವ ವಿನಾಯಿತಿಗಳಿಗೆ ಜೋತಾಡುವ ಪ್ರವೃತ್ತಿ ಇತ್ತೀಚೆಗೆ ನಮ್ಮಲ್ಲಿ ಜಾಸ್ತಿಯಾಗುತ್ತಿದೆ. ತಮ್ಮ ಜಾತಿಯನ್ನು ಹಿಂದುಳಿದ ಪಟ್ಟಿಗೆ ಸೇರಿಸಿ, ಪರಿಶಿಷ್ಟ ಜಾತಿ– ಪಂಗಡದ ವ್ಯಾಪ್ತಿಗೆ ಒಳಪಡಿಸಿ ಎಂದು ಹೋರಾಟ ಮಾಡುವವರು ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಏನು ಕಾರಣ?
ಸಾಮಾಜಿಕ ಪಿಡುಗುಗಳ ಬಗ್ಗೆ ಧ್ವನಿ ಎತ್ತಲು ಈಗ ಯಾರೂ ಮುಂದೆ ಬರುತ್ತಿಲ್ಲ. ಒಟ್ಟು ಸಮಾಜದ ಒಳಿತಿಗಾಗಿ ಟೊಂಕ ಕಟ್ಟಿ ನಿಲ್ಲುವವರ ಸಂಖ್ಯೆ ಕ್ಷೀಣಿಸಿದೆ. ಇದು ನೋವಿನ ಸಂಗತಿ.
ರಾಜಸ್ತಾನದಲ್ಲಿ ಗುಜ್ಜಾರ ಸಮುದಾಯ ಮೀಸಲಾತಿಗಾಗಿ ಒತ್ತಾಯಿಸಿ ಹಿಂಸಾಚಾರ ನಡೆಸಿದ್ದು ನೆನಪಿನಿಂದ ಮಾಸಿಲ್ಲ. ಗುಜರಾತ್ನಲ್ಲಿ ಪಟೇಲ್ ಸಮುದಾಯ ತಮ್ಮ ಜಾತಿಯನ್ನು ಹಿಂದುಳಿದವರ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಹಿಂಸಾಚಾರ ನಡೆಸಿತು.
ಈಗ ಆಂಧ್ರಪ್ರದೇಶದಲ್ಲಿ ಕಾಪು ಸಮುದಾಯದ ಮುಖಂಡರು ಜನರನ್ನು ರೊಚ್ಚಿಗೆಬ್ಬಿಸಿದ್ದಾರೆ. ಒಂದು ಕಡೆ ಸರ್ಕಾರಿ ನೌಕರಿ ಪ್ರಮಾಣ ದಿನೇ ದಿನೇ ಕುಸಿಯುತ್ತಿದೆ. ಮತ್ತೊಂದೆಡೆ ಮೀಸಲಾತಿಗಾಗಿ ಆಗ್ರಹಿಸುವವರ ಸಂಖ್ಯೆ ಹೆಚ್ಚುತ್ತಿದೆ. ಎಂಥ ವಿರೋಧಾಭಾಸ!