ಪುಣೆ (ಪಿಟಿಐ): ಹಿಂದೂ ರಾಷ್ಟ್ರ ಸೇನಾ ಸಂಘಟನೆಗೆ ಸೇರಿದವರು ಎನ್ನಲಾದ ಗುಂಪೊಂದು ಸಾಫ್ಟ್ವೇರ್ ಕಂಪೆನಿ ಉದ್ಯೋಗಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಇಲ್ಲಿನ ಪುಣೆಯ ಹದಪ್ಸರ್ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಶೇಖ್ ಮೊಹಸಿನ್ ಸಾದಿಕ್ (28) ಮೃತಪಟ್ಟವರು. ಕಳೆದ ಸೋಮವಾರ ರಾತ್ರಿ ಘಟನೆ ನಡೆದಿದ್ದು, ಸೊಲ್ಲಾಪುರ ಮೂಲದವರಾದ ಇವರು ಪುಣೆಯ ಹದಪ್ಸರ್ನಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಿಂದೂ ರಾಷ್ಟ್ರ ಸೇನಾ ಸಂಘಟನೆಯ 13 ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಇವರ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ ) 307(ಕೊಲೆ ಯತ್ನ), 147 (ಗಲಭೆ) ಪ್ರಕರಣ ದಾಖಲಾಗಿದೆ.
ಶಿವಾಜಿ ಮತ್ತು ಶಿವಸೇನಾ ಮಾಜಿ ಮುಖ್ಯಸ್ಥ ಬಾಳ ಠಾಕ್ರೆ ಅವರ ಅವಹೇಳನಕಾರಿ ಚಿತ್ರಗಳನ್ನು ಫೇಸ್ಬುಕ್ನಲ್ಲಿ ಪ್ರಕಟಿಸಿರುವುದು ಕೊಲೆಗೆ ಕಾರಣ ಎನ್ನಲಾಗಿದೆ.