ಟೋಕಿಯೊ (ಪಿಟಿಐ): ಭಾರತವನ್ನು ತಯಾರಿಕಾ ವಲಯದ ಗಮ್ಯ ಎಂಬಂತೆ ಬಿಂಬಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಜಪಾನ್ ಹೂಡಿಕೆದಾರರಿಗೆ ರತ್ನಗಂಬಳಿ ಸ್ವಾಗತ ನೀಡುವುದಾಗಿ ಭರವಸೆ ನೀಡಿದ್ದಾರೆ.
ಜಪಾನ್ ಪ್ರವಾಸದ ನಾಲ್ಕನೆಯ ದಿನವಾದ ಮಂಗಳವಾರ ಜಪಾನಿ ಹೂಡಿಕೆದಾರರ ಜತೆ ವಿಚಾರಸಂಕಿರಣದಲ್ಲಿ ಭಾಗಿಯಾಗಿದ್ದ ಮೋದಿ ಅವರು, ಭಾರತದಲ್ಲಿ ಈಗ ವಿಳಂಬ ಗತಿಯ (ರೆಡ್ ಟೇಪಿಸಂ) ಅಧ್ಯಾಯ ಮುಕ್ತಾಯಗೊಂಡಿದ್ದು, ವಾಣಿಜ್ಯ ವ್ಯವಹಾರಗಳಿಗೆ ರತ್ನ ಗಂಬಳಿ (ರೆಡ್ ಕಾರ್ಪೆಡ್) ಸ್ವಾಗತ ಕೋರುವ ಮುಕ್ತ ಯುಗ ಆರಂಭವಾಗಿದೆ ಎಂದರು.
ಜಪಾನ್ ಬಾಹ್ಯ ವ್ಯಾಪಾರ ಸಂಸ್ಥೆ (ಜೆಟ್ರೊ) ಮತ್ತು ನಿಕ್ಕಿ ಸಂಸ್ಥೆಗಳು ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಜಪಾನಿ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಿದ ಅವರು ‘ಭಾರತದಲ್ಲಿ ತಯಾರಿಕೆ’ (ಮೇಕ್ ಇನ್ ಇಂಡಿಯಾ) ಪರಿಕಲ್ಪನೆ ತೆರೆದಿಟ್ಟರು.
100 ದಿನಗಳ ತಮ್ಮ ಸರ್ಕಾರ ವಾಣಿಜ್ಯ ವ್ಯವಹಾರಕ್ಕೆ ಅನುಕೂಲವಾಗುವ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಉತ್ಪನ್ನಗಳ ಬೇಡಿಕೆಯ ದೃಷ್ಟಿಯಿಂದ ನೋಡುವುದಾದರೆ ಬಂಡವಾಳ ಹೂಡಿಕೆಗೆ ಭಾರತದಷ್ಟು ಅವಕಾಶ ಒದಗಿಸುವ ದೇಶ ಮತ್ತೊಂದಿಲ್ಲ. ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಮಾಡಲು ಸಾಧ್ಯವಾಗುವುದರಿಂದ ಇಲ್ಲಿ ‘ಪವಾಡ’ವನ್ನೇ ಮಾಡಬಹುದು ಎಂದರು.
ಭಾರತದಲ್ಲಿ ಲಕ್ಷ ಲಕ್ಷ ಕೋಟಿ ಡಾಲರ್ಗಳನ್ನು ಹೂಡುವ ಅಗತ್ಯವಿದೆ. ಎಲೆಕ್ಟ್ರಾನಿಕ್ ಮಾರುಕಟ್ಟೆ, ಮುಖ್ಯವಾಗಿ ಮೊಬೈಲ್ ಫೋನ್ ಹ್ಯಾಂಡ್ಸೆಟ್ ವಲಯವು ಬೃಹತ್ ಮಾರುಕಟ್ಟೆಯಾಗಿದೆ ಎಂದರು.
ಜಾಗತಿಕ ಮಾರುಕಟ್ಟೆ ತಲುಪಲು ಭಾರತವು ‘ದೇವರು ಕೊಡುಗೆಯಾಗಿ ನೀಡಿರುವ ಸ್ಥಳ’ ಎಂದು ಮೋದಿ ಹೇಳಿದರು. ‘ಜಪಾನ್ ಇಲ್ಲದೆ ಭಾರತ ಅಪೂರ್ಣ. ಭಾರತವಿಲ್ಲದೆ ಜಪಾನ್ ಅಪೂರ್ಣ’ ಎಂದು ಘೋಷಿಸಿದ ಮೋದಿ ಅವರು, ಜಪಾನ್ನ ಹಾರ್ಡ್ವೇರ್ ಕೌಶಲ ಮತ್ತು ಭಾರತದ ಸಾಫ್ಟ್ವೇರ್ ಪರಿಣತರು ಸೇರಿ ಪವಾಡ ಸೃಷ್ಟಿಸಬಲ್ಲರು. 10 ವರ್ಷದಲ್ಲಿ ಸಾಧಿಸಬಹುದಾದ ಪವಾಡವನ್ನು ಎರಡು ವರ್ಷದಲ್ಲಿ ಸಾಧಿಸಲು ಇಲ್ಲಿ ಅವಕಾಶಗಳಿವೆ ಎಂದರು.
ವಿದೇಶಿ ಕಂಪೆನಿಗಳು ಭಾರತದಲ್ಲಿ ಉತ್ಪನ್ನಗಳನ್ನು ತಯಾರಿಸಿದರೆ, ನಿಮ್ಮ ‘ರಾಷ್ಟ್ರೀಯವಾದಿ’ ವರ್ಚಸ್ಸಿಗೆ ಧಕ್ಕೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ, ಇದರಲ್ಲಿ ದ್ವಂದ್ವ ಇಲ್ಲ. ಅದನ್ನು ನಾನು ವಿಸ್ತರಣೆಯ ಭಾಗವಾಗಿ ನೋಡುತ್ತೇನೆ. ಪ್ರವಾಸಿಗಳು ಬೇರೆ ಜಾಗಕ್ಕೆ ಹೋದರೆ ಅವರ ಗುರುತು ಬೇರೆಯಾಗುತ್ತದೆಯೇ ಎಂದರು.
ಜಪಾನ್ ಪ್ರವಾಸ ಯಶಸ್ವಿ: ಜಪಾನ್ ಪ್ರವಾಸವನ್ನು ‘ಅತ್ಯಂತ ಯಶಸ್ವಿ’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಐದು ವರ್ಷಗಳಲ್ಲಿ ಜಪಾನ್ ನೀಡಿರುವ ಭರವಸೆಯಂತೆ ದೊರಕುವ 35 ಶತಕೋಟಿ ಡಾಲರ್ ನೆರವಿನಿಂದ ಮೂಲಸೌಕರ್ಯಗಳ ಸುಧಾರಣೆ ಹಾಗೂ ದೇಶವನ್ನು ಸ್ವಚ್ಛಗೊಳಿಸುವುದು ಸಾಧ್ಯ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಉದ್ಘೋಷ
* ಭಾರತದ ಮೇಲೆ ನಂಬಿಕೆ ಇರಿಸಿದ್ದಕ್ಕೆ ಹಾಗೂ ಫೆವಿಕಾಲ್ಗಿಂತಲೂ ಗಟ್ಟಿಯಾದ ಬಾಂಧವ್ಯ ಪ್ರದರ್ಶಿಸಿರುವುದಕ್ಕೆ ಧನ್ಯವಾದ. ಇದು ದೊಡ್ಡ ಸಾಧನೆ. ಜಪಾನ್ ನಮ್ಮನ್ನು ನಂಬಿರುವುದು ಅತೀವ ಸಂತಸ ತಂದಿದೆ
* ಹಿಂದೆ ನಾವು ಹಾವುಗಳೊಂದಿಗೆ ಆಟವಾಡುತ್ತಿದ್ದೆವು. ಆದರೆ, ಈಗ ಕಂಪ್ಯೂಟರ್ ಮೌಸ್ ಜತೆ ಆಡುತ್ತಿದ್ದೇವೆ. ನಾವು ಮೌಸ್ ಒತ್ತಿದಾಗ, ಜಗತ್ತೇ ಚಲಿಸುತ್ತದೆ
ಭಾರತೀಯರೊಂದಿಗೆ ಬೆರೆತ ಮೋದಿ
ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭದ್ರತಾ ವ್ಯವಸ್ಥೆ ಭೇದಿಸಿ ಸ್ಥಳೀಯ ಭಾರತೀಯ ಸಮುದಾಯದೊಂದಿಗೆ ಮುಕ್ತವಾಗಿ ಬೆರೆಯುವುದರೊಂದಿಗೆ ಗಮನ ಸೆಳೆದರು. ವಿವೇಕಾನಂದ ಕೇಂದ್ರ ಉದ್ಘಾಟಿಸಿ ಭಾರತೀಯ ರಾಯಭಾರ ಕಚೇರಿಯಿಂದ ಹೊರಬಂದ ಅವರು ಜಮಾಯಿಸಿದ್ದ ಭಾರತೀಯ ಅಭಿಮಾನಿಗಳನ್ನು ಗಮನಿಸಿದರು. ಕಾರಿನತ್ತ ತೆರಳುವ ಬದಲು ಗುಂಪಿನತ್ತ ತೆರಳಿ ಹಸ್ತಲಾಘವ ನೀಡಿ, ಕೆಲವರಿಗೆ ಹಸ್ತಾಕ್ಷರವನ್ನೂ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.