ನವದೆಹಲಿ (ಪಿಟಿಐ): ದೇಶದ ಷೇರುಪೇಟೆಗಳು ಹಿಂದೂ ಕ್ಯಾಲೆಂಡರ್ನ ಈ ವರ್ಷದಲ್ಲಿ (2071ನೇ ಸಂವತ್ಸರದಲ್ಲಿ) ಏರುಮುಖವಾಗಿಯೇ ಚಲಿಸಲಿವೆ, ಗೂಳಿಯ ಓಟ ಜೋರಾಗಿರಲಿದೆ, ಇದು ಹೂಡಿಕೆದಾರರ ಪಾಲಿಗೆ ಬಹಳ ಲಾಭ ತರಲಿದೆ, ಹಣ ತೊಡಗಿಸಿದವರನ್ನು ಇನ್ನಷ್ಟು ಶ್ರೀಮಂತಗೊಳಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಷೇರು ಮಾರುಕಟ್ಟೆ ಪಂಡಿತರು.
ಕಳೆದೊಂದು ತಿಂಗಳಿಂದ ಸಾಗರೋತ್ತರ ಹೂಡಿಕೆದಾರರು ಬೃಹತ್ ಪ್ರಮಾಣದಲ್ಲಿ ಷೇರುಗಳನ್ನು ಖರೀದಿಸುತ್ತಿರುವುದು ಷೇರುಪೇಟೆಯ ಮೇಲ್ಮಖ ಚಲನೆಗೆ ವೇಗ ಒದಗಿಸುತ್ತಿದೆ. ಒಟ್ಟಿನಲ್ಲಿ ಈ ವರ್ಷವು ದೇಶದ ಷೇರುಪೇಟೆಯನ್ನು ಭ್ರಮಾತ್ಮಕ ಸುಖದಲ್ಲಿ ತೇಲಿಸಲಿದೆ ಎಂದು ಮಾರುಕಟ್ಟೆ ಪಂಡಿತರ ವಿಶ್ಲೇಷಿಸಿದ್ದಾರೆ.
ಸೂಚ್ಯಂಕಗಳು ಮೇಲೆ ಮೇಲೆ ಏರುತ್ತಾ ಮತ್ತೆ ಮತ್ತೆ ಹೊಸ ದಾಖಲೆಸೃಷ್ಟಿಸುತ್ತಿವೆ. ಇದರಿಂದಾಗಿರುವ ಒಳ್ಳೆಯ ಪರಿಣಾಮವೆಂದರೆ ಚಿಲ್ಲರೆ ಹೂಡಿಕೆದಾರರು ಷೇರುಪೇಟೆಯತ್ತ ಮರಳಿ ಬರುತ್ತಿದ್ದಾರೆ. ಇದು ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದೆ. ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಿದಷ್ಟೂ ಷೇರುಪೇಟೆ ಆರೋಗ್ಯವೂ ಅಷ್ಟೇ ಉತ್ತಮವಾಗಿರಲಿದೆ. ಈವರೆಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮೇಲೆಯೇ ಅವಲಂಬಿತವಾಗಿದ್ದ ಭಾರತದ ಷೇರು ಮಾರುಕಟ್ಟೆಗಳಿಗೆ ಇದು ಶುಭಸೂಚಕ ಎಂದು ಬೊನಾಂಜಾ ಪೋರ್ಟ್ಫೋಲಿಯೋ ಲಿ.ನ ನಿರ್ದೇಶಕ ಎಸ್.ಕೆ.ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.
ಈಗಿನ ಸಂವತ್ಸರದಲ್ಲಿ ಗೂಳಿಯ ಓಟ ವೇಗವಾಗಿರಲಿದೆ. ಕೆಲವೊಮ್ಮೆ ಷೇರುಪೇಟೆಯು ಭಾರಿ ಏರಿಕೆ, ಇಳಿಕೆಯನ್ನೂ ಕಾಣಲಿದೆ. ಇದೇ ವೇಳೆ, ಮಾಹಿತಿ ತಂತ್ರಜ್ಞಾನ, ಔಷಧ ತಯಾರಿಕೆ, ವಾಹನ ತಯಾರಿಕೆ ಉದ್ಯಮ, ಗ್ರಾಹಕ ಬಳಕೆ ಸಾಮಗ್ರಿಗಳ ಕಂಪೆನಿಗಳು ಹಾಗೂ ಬ್ಯಾಂಕಿಂಗ್ ವಿಭಾಗದ ಷೇರುಗಳೇ ಮುಂಚೂಣಿಯಲ್ಲಿದ್ದ ಮಾರುಕಟ್ಟೆಯನ್ನು ಮೇಲಕ್ಕೆ ಕರೆದೊಯ್ಯಲಿವೆ ಎಂದು ಗೋಯಲ್ ಹೇಳಿದ್ದಾರೆ.
2070ನೇ ಸಂವತ್ಸರದಲ್ಲಿ ಬಿಎಸ್ಇ ಸಂವೇದಿ ಸೂಚ್ಯಂಕ ಒಟ್ಟಾರೆಯಾಗಿ 5,590.42 ಅಂಶಗಳ (ಶೇ 26.37) ಏರಿಕೆ ಕಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.