ನವದೆಹಲಿ (ಪಿಟಿಐ): ಎಂಟು ನೂರು ವರ್ಷಗಳ ನಂತರ ದೆಹಲಿಯನ್ನು ಆಳಲು ‘ಹೆಮ್ಮೆಯ ಹಿಂದೂಗಳು’ ಬಂದಿದ್ದಾರೆ ಎಂದಿರುವ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ), ಶಾಲೆಗಳಲ್ಲಿ ಸಂಸ್ಕೃತವನ್ನು ಕಡ್ಡಾಯ ಮಾಡಬೇಕು ಎಂದು ಒತ್ತಾಯಿಸಿದೆ.
ಇಲ್ಲಿ ಶುಕ್ರವಾರ ಆರಂಭವಾದ 3 ದಿನಗಳ ವಿಶ್ವ ಹಿಂದೂ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ವಿಎಚ್ಪಿ ಮುಖ್ಯಸ್ಥ ಅಶೋಕ್ ಸಿಂಘಾಲ್, ‘800 ವರ್ಷ ಹಿಂದೆ ದೆಹಲಿಯನ್ನು ಫೃಥ್ವಿರಾಜ್ ಚೌಹಾಣ್ ಆಳಿದ್ದ. ಆತನ ನಂತರ ಮುಸ್ಲಿಮರು, ಇಂಗ್ಲಿಷರ ಕೈಗೆ ದೆಹಲಿ ಆಡಳಿತ ಹೋಗಿತ್ತು. ಈಗಷ್ಟೇ ಹೆಮ್ಮೆಯ ಹಿಂದೂಗಳು ರಾಜಧಾನಿ ಆಳಲು ಬಂದಿದ್ದಾರೆ’ ಎಂದಿದ್ದಾರೆ.
‘ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತದ ಅಧ್ಯಯನವನ್ನು ಕಡ್ಡಾಯಗೊಳಿಸಬೇಕು. ಅಲ್ಲದೆ ಕಡ್ಡಾಯಗೊಳಿಸಬೇಕಾದ ಮತ್ತಷ್ಟು ವಿಷಯಗಳಿವೆ. ಅದಕ್ಕೆ ಈಗ ಸಮಯ ಬಂದಿದೆ’ ಎಂದಿದ್ದಾರೆ. ಸಮ್ಮೇಳನದಲ್ಲಿ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಮಾತನಾಡಿ, ‘ಹಿಂದೂಗಳು ಒಗ್ಗಟ್ಟಿನಿಂದ ಎದ್ದೇಳಬೇಕು. ನಾವು ವಿಶ್ವನಾಯಕರು ಎಂಬುದನ್ನು ತೋರಿಸಬೇಕು’ ಎಂದಿದ್ದಾರೆ.
ನರಸಿಂಹ ರಾವ್, ದೇವೇಗೌಡ, ವಾಜಪೇಯಿ ಹಿಂದೂಗಳಲ್ಲವೆ?: ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು, ಇಂತಹ ಕೋಮುವಾದಿ ರಾಜಕಾರಣ ದೇಶದ ಏಕತೆ ಮತ್ತು ಸಂವಿಧಾನಕ್ಕೆ ವಿರೋಧವಾದುದು. ಕೇಸರಿವಾಲಾಗಳು ಭಾಷೆಯ ವಿಚಾರದಲ್ಲೂ ತಮ್ಮ ಬೂಟಾಟಿಕೆ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ಶಕ್ತಿಸಿನ್ಹ ಗೋಹಿಲ್, ‘ಸಂಘ ಪರಿವಾರದವರ ಹಿಂದೂ ವ್ಯಾಖ್ಯಾನ ಬೇರೆಯೇ ಆಗಿದೆ. ಹಾಗಿದ್ದಲ್ಲಿ, ಪಿ.ವಿ. ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಎಚ್.ಡಿ. ದೇವೇಗೌಡ ಹಿಂದೂಗಳಲ್ಲದೆ ಯಾರು ಎಂದು ಕೇಳಬೇಕಿದೆ’ ಎಂದು ಟೀಕಿಸಿದ್ದಾರೆ.