ರಾಯಚೂರು: ತುಂಗಭದ್ರಾ ನೀರಾವರಿ ಕಾರ್ಮಿಕರ ಹೊರ ಗುತ್ತಿಗೆ ಅಧಿಸೂಚನೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ತುಂಗಭದ್ರಾ ನೀರಾವರಿ ವಲಯ ಕಾರ್ಮಿಕರ ಸಂಘ ಹಾಗೂ ಟಾಸ್ಕ್ ವರ್ಕ್ ನೌಕರರ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಅನಿರ್ದಿಷ್ಟ ಧರಣಿ ಆರಂಭಿಸಿದರು.
ಕನಿಷ್ಠ ವೇತನ ಕಾಯ್ದೆ ಹಾಗೂ ವೇತನ ಪಾವತಿ ಕಾಯ್ದೆ ಅನುಸಾರ ಹಾಗೂ ಪ್ರಸ್ತುತ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯನಿರ್ವಾಹಕ, ಕಿರಿಯ ಎಂಜಿನಿಯರ್ ಕಾರ್ಯ ವಿಧಾನದಂತೆ ಹಾಲಿ ಕಾರ್ಮಿಕರ ಸೇವೆಯನ್ನು ಮುಂದುವರಿಸಬೇಕು. ತುಂಗಭದ್ರಾ ನೀರಾವರಿ ವಲಯದಲ್ಲಿ ಹೊರಗುತ್ತಿಗೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಭದ್ರ ಹಾಗೂ ಇತರ ವಲಯದಲ್ಲಿರುವಂತೆ ವರ್ಷ ಪೂರ್ತಿ ಕೆಲಸ ನೀಡಿ ಸೇವಾ ಭದ್ರತೆ ಒದಗಿಸಬೇಕು. ಹಾಲಿ ಕಾರ್ಮಿಕರ ವೇತನ ವ್ಯತ್ಯಾಸ ಹಾಗೂ ಬಾಕಿ ವೇತನ ಕೂಡಲೇ ಪಾವತಿಸಬೇಕು. ಕಾರ್ಮಿಕರ ಇದುವರೆಗಿನ ಸೇವೆಗೆ ಸಂಬಂಧಿಸಿದ ಸೇವಾ ಪ್ರಮಾಣ ಪತ್ರ ನೀಡಬೇಕು ಎಂದು ಸಂಘದ ಅಧ್ಯಕ್ಷ ಆರ್. ಮಾನಸಯ್ಯ ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಅಡವಿರಾವ್, ಪದಾಧಿಕಾರಿಗಳಾದ ಎಸ್.ರಾಜಶೇಖರ, ಆರ್.ಹುಚ್ಚರೆಡ್ಡಿ, ಚಿನ್ನಪ್ಪ ಕೊಟ್ರಿಕ್ಕಿ, ಪುರುಷೋತ್ತಮ, ಸಿದ್ದಪ್ಪ ವಾದಿರಾಜ, ಬಸನಗೌಡ ಕಲ್ಲೂರು, ಶಾಮ, ಶರಣಪ್ಪ, ಎಂ.ಬಸವರಾಜ, ಜಿ.ಅಮರೇಶ ಮತ್ತಿತರರಿದ್ದರು.