ನವದೆಹಲಿ (ಪಿಟಿಐ): ರಾಜಕೀಯ ವಲಯದಲ್ಲಿ ‘ಅಜಾತಶತ್ರು’ ಎಂದೇ ಖ್ಯಾತರಾಗಿರುವ ಅಟಲ್್ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರು. ಅಸಾಧಾರಣ ವಾಕ್ಪಟುತ್ವದ ಅವರು ತಮ್ಮ ಆಡಳಿತಾವಧಿಯಲ್ಲಿ ತೆಗೆದುಕೊಂಡ ದಿಟ್ಟ ಕ್ರಮಗಳಿಂದ ಮುತ್ಸದ್ದಿ ರಾಜಕಾರಣಿ ಎನಿಸಿಕೊಂಡರು.
ಕಾಂಗ್ರೆಸ್ಸೇತರ ಪ್ರಧಾನಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ವಾಜಪೇಯಿ, ಬಿಜೆಪಿಯ ಸೌಮ್ಯವಾದಿ ನಾಯಕ ಎಂದೂ ಕರೆಸಿಕೊಂಡವರು. ಇದೇ ವೇಳೆ, ಟೀಕಾಕಾರರು ಅವರನ್ನು ಆರ್ಎಸ್ಎಸ್್ ‘ಮುಖವಾಡ’ ಎಂದು ಜರಿದಿದ್ದೂ ಉಂಟು.
ವಾಜಪೇಯಿ ಅವರು1924ರ ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಜನಿಸಿದರು.
ತಂದೆ ಕೃಷ್ಣ ಬಿಹಾರಿ ವಾಜಪೇಯಿ, ತಾಯಿ ಕೃಷ್ಣಾ ದೇವಿ. ಬ್ರಿಟಿಷ್ ವಸಾಹತುಶಾಹಿ ಆಡಳಿತವನ್ನು ವಿರೋಧಿಸಿದ್ದಕ್ಕೆ ಅವರು ಹದಿವಯಸ್ಸಿನಲ್ಲಿ ಸ್ವಲ್ಪ ಕಾಲ ಜೈಲು ವಾಸದಲ್ಲಿದ್ದರು. ೫೦ರ ದಶಕದ ಆರಂಭದಲ್ಲಿ ಆರ್ಎಸ್ಎಸ್್ ನಿಯತಕಾಲಿಕೆಯೊಂದನ್ನು ನಡೆಸುವುದಕ್ಕಾಗಿ ಕಾನೂನು ವ್ಯಾಸಂಗವನ್ನು ತೊರೆದರು. ಅವರು ಭಾರತೀಯ ಜನ ಸಂಘದ (ಬಿಜೆಎಸ್) ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ಕಟ್ಟಾ ಅನುಯಾಯಿಯಾಗಿದ್ದರು.
ರಾಜಕೀಯ ಹೆಜ್ಜೆ ಗುರುತು: 1957ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದರು. ಐದು ದಶಕಗಳಿಗೂ ಹೆಚ್ಚು ಕಾಲ ಸಂಸದೀಯ ಪಟುವಾಗಿ ಗಮನ ಸೆಳೆದರು.1996ರಲ್ಲಿ ಮೊಟ್ಟಮೊದಲು ಪ್ರಧಾನಿಯಾದರು. ಆದರೆ ಬಹುಮತದ ಕೊರತೆಯಿಂದ ಕೇವಲ 13 ದಿನಗಳಲ್ಲಿ ಅಧಿಕಾರ ಕಳೆದುಕೊಂಡರು. 1998ರಲ್ಲಿ ಎರಡನೆಯ ಬಾರಿ ಪ್ರಧಾನಿ ಪಟ್ಟ ಅಲಂಕರಿಸಿದರು. ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಬೆಂಬಲ ವಾಪಸ್ ಪಡೆದ ಕಾರಣ 13 ತಿಂಗಳಿಗೆ ಅಧಿಕಾರ ಕಳೆದುಕೊಳ್ಳಬೇಕಾಯಿತು.
1999ರಲ್ಲಿ ಪ್ರಧಾನಿಯಾಗಿ ಮರುಆಯ್ಕೆಯಾಗಿ ಪೂರ್ತಿ ಐದು ವರ್ಷ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ವಾಜಪೇಯಿ ಅಧಿಕಾರದಲ್ಲಿದ್ದಾಗ ಭಾರತವು1998ರಲ್ಲಿ ರಾಜಸ್ತಾನದ ಪೋಖ್ರಾನ್ನಲ್ಲಿ ಸರಣಿ ಪರಮಾಣು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತು.
ದೇಶದ ಪ್ರಮುಖ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಸುವರ್ಣ ಚತುಷ್ಕೋನ ರಸ್ತೆ ನಿರ್ಮಾಣ ಯೋಜನೆ ಕೂಡ ವಾಜಪೇಯಿ ಅವರ ಪರಿಕಲ್ಪನೆಯೇ.
ಪಾಕಿಸ್ತಾನ ಜತೆಗಿನ ಸಂಬಂಧವನ್ನು ಸುಧಾರಿಸುವುದು ವಾಜಪೇಯಿ ಅವರ ವೈಯಕ್ತಿಕ ಗುರಿಯಾಗಿತ್ತು ಎನ್ನುತ್ತಾರೆ ಅವರ ನಿಕಟವರ್ತಿಗಳು. 19೭೦ರ ದಶಕದ ಕೊನೆಯಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾಗಿದ್ದರು. ಆಗಲೇ ಅವರು ಭಾರತ–ಪಾಕ್ ಸಂಬಂಧಕ್ಕೆ ಹೊಸ ಆಯಾಮ ನೀಡಲು ವೇದಿಕೆ ಅಣಿಗೊಳಿಸಿದ್ದರು.
ವಾಜಪೇಯಿ ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಆದರೆ ಶಸ್ತ್ರಾಸ್ತ್ರ ಖರೀದಿಯಲ್ಲಿ ನಡೆದ ಲಂಚ ಪ್ರಕರಣವು ಅವರ ಸರ್ಕಾರದ ಭ್ರಷ್ಟತೆಯನ್ನು ಬೆತ್ತಲು ಮಾಡಿತು. ಆ ಸಂದರ್ಭದಲ್ಲಿ ವಾಜಪೇಯಿ ಅವರು ತೆಗೆದುಕೊಂಡಿದ್ದ ನಿರ್ಧಾರವನ್ನು ಕೂಡ ಅನುಮಾನದಿಂದ ನೋಡಲಾಯಿತು. ಅವಿವಾಹಿತರಾದ ವಾಜಪೇಯಿ ಕವಿಯೂ ಹೌದು.
ಅಗ್ನಿ ಪರೀಕ್ಷೆ...
1992ರ ಡಿಸೆಂಬರ್್ 6 ರಂದು ಅಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣವು ವಾಜಪೇಯಿ ಅವರಿಗೆ ಅಗ್ನಿಪರೀಕ್ಷೆಯಾಗಿತ್ತು.ಆ ಸಂದರ್ಭದಲ್ಲಿ ಅವರು ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. ಎಲ್.ಕೆ. ಅಡ್ವಾಣಿ ಹಾಗೂ ಬಿಜೆಪಿಯ ಇತರ ರಾಜಕಾರಣಿಗಳು ಈ ಪ್ರಕರಣವನ್ನು ಸಮರ್ಥಿಸಿಕೊಂಡಿದ್ದರು. ಆದರೆ ವಾಜಪೇಯಿ ಇದನ್ನು ಖಂಡಿಸಿ ತಮ್ಮ ಧರ್ಮನಿರಪೇಕ್ಷ ನಿಲುವಿಗೆ ಅಂಟಿಕೊಂಡರು.
ಸ್ವಾತಂತ್ರ್ಯ ಹೋರಾಟಗಾರ
ವಾಜಪೇಯಿ ಕೂಡಾ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು. ದೇಶಕ್ಕೆ ಅನುಪಮ ಸೇವೆ ಸಲ್ಲಿಸಿದವರಿಗೆ, ವಿಶೇಷ ಸಾಧನೆ ಮಾಡಿದವರಿಗೆ ‘ಭಾರತ ರತ್ನ’ ನೀಡಲಾಗುತ್ತಿದೆ. ಅದೇ ಬಗೆಯಲ್ಲಿ ವಾಜಪೇಯಿ ಅವರಿಗೆ ನೀಡುತ್ತಿರುವುದು ಸ್ವಾಗತಾರ್ಹ.
–ಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಯೋಗದ ಹೆಗ್ಗಳಿಕೆ...
ವಾಜಪೇಯಿ ಅವರಿಗೆ ಯುಪಿಎ ಸರ್ಕಾರದ ಅವಧಿಯಲ್ಲಿಯೇ ಈ ಪುರಸ್ಕಾರ ದೊರೆಯಬೇಕಿತ್ತು. ವಾಜಪೇಯಿ ಅವರು ಕಾರ್ಗಿಲ್್ ಯುದ್ಧದ ವೇಳೆ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಸಮ್ಮಿಶ್ರ ಸರ್ಕಾರದ ಯಶಸ್ವಿ ಪ್ರಯೋಗದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ
– ನಿತೀಶ್ ಕುಮಾರ್, ಜೆಡಿಯು ಮುಖಂಡ
ಮುಸ್ಲಿಂ ಮಂಡಳಿ ಸ್ವಾಗತ
ವಾಜಪೇಯಿ ಅವರಿಗೆ ‘ಭಾರತ ರತ್ನ’ ಪುರಸ್ಕಾರ ನೀಡಿರುವುದು ತುಂಬಾ ಒಳ್ಳೆಯ ನಿರ್ಧಾರ. ದೇಶದ ಅಭಿವೃದ್ಧಿಗಾಗಿ ಕೊಡುಗೆ ನೀಡಿದವರನ್ನು ಗೌರವಿಸಬೇಕು
– ಮೌಲಾನಾ ಖಾಲಿದ್ ರಷೀದ್, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ
ರಾಜಧರ್ಮ ಪಾಲಿಸಲಿ...
ಅಟಲ್ ಬಿಹಾರಿ ವಾಜಪೇಯಿ ಹಾಗೂ ಮಾಳವೀಯ ಅವರು ಹಾಕಿಕೊಟ್ಟ ಮಾರ್ಗವನ್ನು ಎನ್ಡಿಎ ಸರ್ಕಾರ ಅನುಸರಿಸುತ್ತದೆ ಎಂದು ಭಾವಿಸುತ್ತೇವೆ. ವಾಜಪೇಯಿ ‘ರಾಜಧರ್ಮ’ದ ಬಗ್ಗೆ ಮಾತನಾಡಿದ್ದರು. ನರೇಂದ್ರ ಮೋದಿ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು
– ಅಜಯ್ ಮಾಕನ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಗೌರವಾರ್ಹ ವ್ಯಕ್ತಿ
ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ. ನಾವೆಲ್ಲ ವಾಜಪೇಯಿ ಅವರನ್ನು ಗೌರವಿಸುತ್ತೇವೆ
–ಮಮತಾ ಬ್ಯಾನರ್ಜಿ, ಪಶ್ಚಿಮಬಂಗಾಳ ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.