ಬೆಂಗಳೂರು: ‘ಅಧಿಕಾರ ಹಂಚಿಕೆಗೆ, ಮೀಸಲಾತಿ ಪಡೆಯಲು ಜಾತಿ ಜನಗಣತಿ ಬೇಕು. ಹೀಗಾಗಿ, ಜಾತಿ ಜನಗಣತಿಯನ್ನು ಎಲ್ಲರೂ ಬೆಂಬಲಿಸಬೇಕು’ ಎಂದು ‘ಅಹಿಂದ’ ರಾಜ್ಯ ಘಟಕದ ಅಧ್ಯಕ್ಷ ಕೆ.ಮುಕುಡಪ್ಪ ಹೇಳಿದರು. ಅಂಬೇಡ್ಕರ್ ಯುವಸೇನೆ ಕರ್ನಾಟಕ ರಾಜ್ಯ ಸಮಿತಿಯು ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಸ್ವತಂತ್ರ ಭಾರತದಲ್ಲಿ ಮೀಸಲಾತಿ ಪರಿಕಲ್ಪನೆ: ಸ್ಥಿತಿಗತಿ ಅವಲೋಕನ’ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
‘ಜಾತಿ ಜನಗಣತಿಯಲ್ಲಿ ಎಲ್ಲರೂ ನಿಜವಾದ ಜಾತಿಯ ಹೆಸರನ್ನೇ ಬರೆಸಿ. ನಿಮ್ಮ ಜಾತಿಯನ್ನು ಹೇಳಿಕೊಳ್ಳಲು ಯಾವುದೇ ಸಂಕೋಚ, ಭಯ ಬೇಡ’ ಎಂದರು. ‘ಅಂಬೇಡ್ಕರ್ ಜಾತಿ ಜನಗಣತಿ ಆಗಲೇಬೇಕು ಎಂದು ಪ್ರತಿಪಾದಿಸಿದ್ದರು. ಆದರೆ, 1950ರಲ್ಲಿ ನೆಹರು ಅವರು ಜಾತಿ ಜನಗಣತಿ ಬೇಡ ಎಂದಿದ್ದರು. ಸರ್ದಾರ್ ವಲ್ಲಬ್ಬಾಯ್ ಪಟೇಲ್ ಅವರನ್ನು ಜಾತಿ ಹೆಸರಿನಲ್ಲಿ ಪ್ರಧಾನಿಯಾಗಲು ಬಿಡಲಿಲ್ಲ’ ಎಂದರು.
‘ಭಾರತ ದೇಶ ಬಲಿಷ್ಠವಾಗಲು ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ ಹೋರಾಡಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ದೇಶವನ್ನು ಬಲಿಷ್ಠಗೊಳಿಸಲು ಹೋರಾಡಿದರು. ಎಲ್ಲರೂ ಅಂಬೇಡ್ಕರ್ ಅವರ ಆದರ್ಶದಲ್ಲಿ ನಡೆಯಬೇಕಾಗಿದೆ’ ಎಂದು ಹೇಳಿದರು.