ನವದೆಹಲಿ (ಪಿಟಿಐ): ಲೇಖಕರು ಹಾಗೂ ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ನಡೆಯುತ್ತಿರುವ ದಾಳಿಗಳನ್ನು ನಿಗ್ರಹಿಸಲು ಮುಂದಾಗಬೇಕು ಎಂದು ಪ್ರಮುಖ ಸಾಹಿತಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಪ್ರಧಾನ ಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯವು ಸಂವಿಧಾನಿಕ ಹಕ್ಕಾಗಿದ್ದು, ಇದನ್ನು ಹರಣ ಮಾಡುವ ಯತ್ನ ನಡೆಯುತ್ತಿದ್ದು, ಪ್ರಧಾನ ಮಂತ್ರಿ ಕಚೇರಿ ಈ ಬಗ್ಗೆ ವಹಿಸಿರುವ ಮೌನವನ್ನು ಸಾಹಿತಿಗಳು ಪ್ರಶ್ನಿಸಿದ್ದಾರೆ.
‘ಮೋದಿ ಪ್ರಧಾನಿಯಾದರೆ ನಾಡಿನಲ್ಲಿ ಇರುವುದಿಲ್ಲ’ ಎನ್ನುವ ಸಾಹಿತಿ ಯು.ಆರ್.ಅನಂತಮೂರ್ತಿ ಅವರಿಗೆ ಈಚೆಗೆ ಕಿಡಿಗೇಡಿಗಳು ಪಾಕಿಸ್ತಾನದ ಕರಾಚಿಗೆ ಏಕಮುಖ ವಿಮಾನದ ಟಿಕೆಟ್ ಕಳುಹಿದ್ದು, ದೂರವಾಣಿಗಳ ಮೂಲಕ ಬೆದರಿಕೆ ಹಾಕಿದ ಪ್ರಕರಣವನ್ನು ಕಾರ್ಯಕರ್ತರು ಉದಾಹರಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾದ ಅರುಣಾ ರಾಯ್, ರೊಮಿಲಾ ಥಾಪರ್, ಬಾಬಾ ಅಧವ್, ವಿವನ್ ಸುಂದರಂ, ಮೃಣಾಲ್ ಪಾಂಡೆ, ಜೀನ್ ಡ್ರೇಜ್, ಜಯತಿ ಘೋಷ್, ಆನಂದ್ ಪಟವರ್ಧನ್, ಮಲ್ಲಿಕಾ ಸಾರಾಬಾಯಿ ಜಂಟಿ ಹೇಳಿಕೆಯಲ್ಲಿ ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನ ಮಂತ್ರಿಗಳನ್ನು ಒತ್ತಾಯಿಸಿದ್ದಾರೆ.