ಯಲಹಂಕ: ಸಮಾಜದಲ್ಲಿ ಅನ್ಯಾಯ ಮತ್ತು ಅಸಮಾನತೆ ತೊಲಗಿ, ಅವಕಾಶಗಳಿಂದ ವಂಚಿತರಾದವರಿಗೆ ಸಮಾನ ಹಾಗೂ ವಂಚನೆಗೊಳಗಾದವರಿಗೆ ವಿಶೇಷವಾದ ಅವಕಾಶಗಳು ಸಿಗಬೇಕು ಎಂಬುದು ಅಂಬೇಡ್ಕರ್ ಅವರ ಮೂಲ ಉದ್ದೇಶ ಮತ್ತು ಧ್ಯೇಯವಾಗಿತ್ತು ಎಂದು ಲೇಖಕ ಮಂಗಳೂರು ವಿಜಯ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯ, ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಅಂಬೇಡ್ಕರ್ ವಿಶೇಷ ಉಪನ್ಯಾಸಮಾಲೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮಹಿಳೆಯರಿಗಾಗಿ ಒದಗಿಸಿರುವ ಹಕ್ಕುಗಳು ಮತ್ತು ಅಧಿಕಾರಗಳು ಎಷ್ಟರಮಟ್ಟಿಗೆ ದೊರಕಿವೆ. ದೊರಕದಿರುವುದಕ್ಕೆ ಕಾರಣಗಳು, ಅವುಗಳ ನಿವಾರಣೆಗೆ ಪರಿಹಾರಗಳೇನು ಎಂಬುದರ ಕುರಿತು ಗಂಭೀರವಾದ ಚರ್ಚೆಗಳು ನಡೆಯಬೇಕಾಗಿದೆ. ಆ ಮೂಲಕ ಪರಿಹಾರಗಳನ್ನು ಕಂಡುಕೊಂಡರೆ, ಸಮಾನತೆಯ ಸಮಾಜವನ್ನು ನಿರ್ಮಾಣಮಾಡಲು ಸಾಧ್ಯವಿದೆ ಎಂದರು.
ಬೆಂ.ವಿ.ವಿ. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿದ್ದಲಿಂಗಯ್ಯ ಮಾತ ನಾಡಿ, ಇತ್ತೀಚೆಗೆ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರಗಳು ಹಾಗೂ ದೌರ್ಜನ್ಯಗಳು ನಡೆಯುತ್ತಿರುವುದು ದುರದೃಷ್ಟಕರ. ಇದನ್ನು ಕೇವಲ ಮಹಿಳೆಯರಷ್ಟೇ ಅಲ್ಲದೆ, ಪುರುಷರೂ ವಿರೋಧಿಸುವ ಮೂಲಕ ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆ ವಿಧಿಸಬೇಕು ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿ ತಂಡಗಳಿಗೆ ಬಹುಮಾನ ವಿತರಿಸಲಾಯಿತು.