ಪ್ರತಿಯೊಬ್ಬರಿಗೂ ನಿರ್ದಿಷ್ಟ ಗುರುತಿನ ಸಂಖ್ಯೆ ನೀಡುವ ಆಧಾರ್ ಯೋಜನೆಗೆ ಕೇಂದ್ರದ ಎನ್ಡಿಎ ಸರ್ಕಾರ ಬೆಂಬಲವನ್ನು ವ್ಯಕ್ತಪಡಿಸಿದೆ. ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ‘ಆಧಾರ್’ ಗುರುತು ಚೀಟಿ ಯೋಜನೆ ವಿವಾದದಲ್ಲಿ ಸಿಲುಕಿಕೊಂಡಿತ್ತು. ಈ ಯೋಜನೆ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಹಾಗೂ ಹಣಕಾಸು ಸಚಿವಾಲಯಗಳ ಮಧ್ಯೆ ಸಂಘರ್ಷ ಉಂಟಾಗಿತ್ತು. ಈ ಯೋಜನೆ ಅಡಿ ಸಂಗ್ರಹಿಸುವ ವೈಯಕ್ತಿಕ ಮಾಹಿತಿಗಳ ಸತ್ಯಾಸತ್ಯತೆ ಬಗ್ಗೆ ಯುಪಿಎ ಅವಧಿಯಲ್ಲಿ ಗೃಹ ಸಚಿವಾಲಯ ಸಂಶಯ ವ್ಯಕ್ತಪಡಿಸಿತ್ತು.
ಗುರುತನ್ನು ಖಾತ್ರಿ ಪಡಿಸುವುದಕ್ಕೆ ಅಥವಾ ಇತರ ದಾಖಲಾತಿಗಳ ಅಸಲಿತನ ಸಾಬೀತುಪಡಿಸಲು ‘ವಿಶಿಷ್ಟ ಗುರುತು’ ಅತ್ಯಗತ್ಯವಲ್ಲ ಎಂಬುದು ಅದರ ನಿಲುವಾಗಿತ್ತು. ಈಗ ಕೇಂದ್ರ ಗೃಹ ಸಚಿವಾಲಯ ತನ್ನ ಹಿಂದಿನ ನಿಲುವನ್ನು ಬದಲಿಸಿದೆ. ‘ಪ್ರತಿಯೊಬ್ಬರಿಗೂ ನಿರ್ದಿಷ್ಟ ಆಧಾರ್ ಸಂಖ್ಯೆ ಕೊಡುವುದರಿಂದ ವ್ಯಕ್ತಿಯ ಗುರುತನ್ನು ಸಾರ್ವತ್ರಿಕವಾಗಿ ದೃಢಪಡಿಸಬಹುದು. ಸೌಲಭ್ಯ ವಂಚಿತರು ಹಾಗೂ ಬಡವರು ಬ್ಯಾಂಕಿಂಗ್ನಂಥ ಸೇವೆ ಪಡೆದುಕೊಳ್ಳುವುದಕ್ಕೆ ಇದು ನೆರವಾಗುತ್ತದೆ’ ಎಂದು ಎಲ್ಲ ರಾಜ್ಯ ಸರ್ಕಾರಗಳಿಗೆ ಬರೆದ ಪತ್ರದಲ್ಲಿ ಗೃಹ ಸಚಿವಾಲಯ ತಿಳಿಸಿದೆ. ಇದು ವಾಸ್ತವಿಕವಾದ ದೃಷ್ಟಿಕೋನ. ಈ ಯೋಜನೆಯ ಲಾಭಗಳನ್ನು ಅದು ಸರಿಯಾಗಿಯೇ ಗ್ರಹಿಸಿದೆ. ಆಧಾರ್ ಕಾರ್ಡ್, ವ್ಯಕ್ತಿಯ ಜೈವಿಕ ಮಾಹಿತಿ ಆಧರಿಸಿರುವುದರಿಂದ ವಂಚನೆ, ನಕಲಿ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತದೆ. ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿ ದೇಶದಾದ್ಯಂತ ಎಲ್ಲ ಸಂದರ್ಭದಲ್ಲಿಯೂ ತನ್ನ ಗುರುತನ್ನು ರುಜುವಾತುಪಡಿಸಬಹುದು’ ಎಂದು ಅದು ಹೇಳಿರುವುದು ಸರಿಯಾದುದು.
ಈಗಾಗಲೇ ರಾಷ್ಟ್ರದಲ್ಲಿ ಆಧಾರ್ ಯೋಜನೆ ಜಾರಿಗೊಂಡಿದೆ. ೬೭ ಕೋಟಿಗೂ ಹೆಚ್ಚು ಆಧಾರ್ ಸಂಖ್ಯೆ ಇರುವ ಕಾರ್ಡ್ಗಳನ್ನು ವಿತರಿಸಲಾಗಿದೆ. ಸರ್ಕಾರಿ ಯೋಜನೆಗಳ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ವಿತರಿಸಲು ಈ ಯೋಜನೆ ಸಹಕಾರಿಯಾಗುತ್ತದೆ. ಇದರಿಂದ ಮಧ್ಯವರ್ತಿಗಳನ್ನು ನಿವಾರಿಸುವುದು ಸಾಧ್ಯ. ಅಂತಿಮವಾಗಿ ಭ್ರಷ್ಟಾಚಾರವನ್ನು ತಡೆಯುವಲ್ಲಿ ಇದು ಕೊಡುಗೆ ಸಲ್ಲಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಸರ್ಕಾರದ ಮಟ್ಟದಲ್ಲಿ ಇದ್ದ ಗೊಂದಲಗಳು ಪರಿಹಾರವಾಗಿ ಈ ಯೋಜನೆ ಜಾರಿ ವ್ಯಾಪಕವಾಗಬೇಕು. ಹೆಚ್ಚು ಹೆಚ್ಚು ಯೋಜನೆಗಳನ್ನು ‘ಆಧಾರ್’ ಮೂಲಕ ಒದಗಿಸಲು ಸರ್ಕಾರ ಮುಂದಾಗಲಿದೆ ಎಂದೂ ಎನ್ಡಿಎ ಸರ್ಕಾರ ಪ್ರಕಟಿಸಿದೆ. ಆದರೆ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಆಧಾರ್ ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಅನೇಕ ಸಲ ಕೇಂದ್ರಕ್ಕೆ ಸೂಚಿಸಿದೆ. ಹೀಗಾಗಿ ಈ ಯೋಜನೆಯಲ್ಲಿನ ನ್ಯೂನತೆಗಳನ್ನು ಪರಿಹರಿಸಲು ಯೋಜನೆಗೆ ಕಾನೂನಿನ ಬಲ ಕೊಡಲೂ ಸರ್ಕಾರ ಮುಂದಾಗಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.