ನವದೆಹಲಿ: ‘ಆಫ್ರಿಕಾ ಖಂಡದ ದೇಶಗಳು ಭಾರತಕ್ಕಿಂತ ಸುರಕ್ಷಿತವಲ್ಲ’ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಹೇಳಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ.
ಕಾಂಗೋ ದೇಶದ ವಿದ್ಯಾರ್ಥಿಯ ಹತ್ಯೆ ಘಟನೆಗೆ ಆಫ್ರಿಕಾ ದೇಶಗಳು ಆಕ್ರೋಶ ವ್ಯಕ್ತಪಡಿಸಿರುವ ಸಂದರ್ಭದಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ. ‘ಭಾರತವು ಬೃಹತ್ ದೇಶ. ಇಂತಹ ಘಟನೆ ದೇಶದ ಘನತೆಗೆ ಧಕ್ಕೆ ಉಂಟುಮಾಡುತ್ತದೆ. ಇದು ದುರದೃಷ್ಟಕರ. ಆದರೆ ಆಫ್ರಿಕಾ ದೇಶಗಳು ಕೂಡಾ ಸುರಕ್ಷಿತವಲ್ಲ. ಈ ರೀತಿಯ ಘಟನೆಗಳು ಜಗತ್ತಿನ ಇತರ ಭಾಗಗಳಲ್ಲೂ ನಡೆಯುತ್ತವೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
‘ಆಫ್ರಿಕಾ ದೇಶಗಳು ಎಷ್ಟು ಅಸುರಕ್ಷಿತ ಎಂಬ ಅನುಭವ ನನಗೆ ಉಂಟಾಗಿದೆ. ಒಮ್ಮೆ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ್ದ ವೇಳೆ ವಾಯು ವಿಹಾರಕ್ಕೆ ಮುಂದಾಗಿದ್ದೆ. ಆದರೆ, ಬೆಳಿಗ್ಗೆ 6 ಕ್ಕೆ ಮುನ್ನ ಹೊರಗಿಳಿಯುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಹೋಟೆಲ್ನವರು ತಿಳಿಸಿದ್ದರು. ಇದೇ ಕಾರಣದಿಂದ ರಾತ್ರಿಯ ವಿಹಾರವನ್ನೂ ನಿಲ್ಲಿಸಿದ್ದೆ. ಭಾರತ ಅಸುರಕ್ಷಿತ ಎಂದು ಹೇಳುವುದು ಸರಿಯಲ್ಲ’ ಎಂದಿದ್ದಾರೆ.