ಬೆಂಗಳೂರು: ಕೇಂದ್ರ ಸರ್ಕಾರವು ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಿದ್ದು, ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಮೂಡಿಸಿದೆ ಎಂದು ಆದಾಯ ತೆರಿಗೆ (ತನಿಖೆ) ಪ್ರಧಾನ ನಿರ್ದೇಶಕ ಎಸ್.ಕೆ.ಮಿಶ್ರಾ ಅಭಿಪ್ರಾಯಪಟ್ಟರು.
ವಾಣಿಜ್ಯೋದ್ಯಮಗಳ ಮಹಾಸಂಘ (ಅಸೋಚಾಮ್) ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕೇಂದ್ರ ಬಜೆಟ್ 2015–16’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ‘ಉದ್ಯಮ ವಲಯಕ್ಕೆ ಅತ್ಯುತ್ತಮ ವಾತಾವರಣ ಕಲ್ಪಿಸಿಕೊಡಲಾಗಿದೆ. ಜೊತೆಗೆ ಆರ್ಥಿಕ ಸ್ಥಿರತೆ ಹಾಗೂ ಪಾರದರ್ಶಕತೆ ಸಾಧಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ’ ಎಂದರು.
‘ಬಜೆಟ್ ಎನ್ನುವುದು ಕೇವಲ ಅಂಕಿ ಅಂಶಗಳ ಆಟವಲ್ಲ. ಅದೊಂದು ದೃಷ್ಟಿಕೋನ ಹಾಗೂ ಧ್ಯೇಯದ ತಿರುಳನ್ನು ಹೊಂದಿರುವ ಸೂಕ್ಷ್ಮ ವಿಚಾರ. ಸಮತೋಲನದಿಂದ ಕೂಡಿರಬೇಕಾದ ಬಜೆಟ್ನಲ್ಲಿ ಎಲ್ಲರನ್ನೂ ಸಂತೃಪ್ತಗೊಳಿಸುವುದು ಅಷ್ಟು ಸುಲಭವಲ್ಲ’ ಎಂದು ಹೇಳಿದರು.
‘ಈ ಎಲ್ಲಾ ಅಡೆತಡೆಗಳ ನಡುವೆ ಈ ಬಾರಿಯ ಬಜೆಟ್ ಉದ್ಯಮ ಸ್ನೇಹಿಯಾಗಿದೆ. ಪ್ರಮುಖವಾಗಿ ಹೂಡಿಕೆದಾರರನ್ನು ಆಕರ್ಷಿಸಲು ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬಲು ಕಸರತ್ತು ನಡೆಸಲಾಗಿದೆ. ಜೊತೆಗೆ ತೆರಿಗೆದಾರರಲ್ಲಿ ಆತ್ಮವಿಶ್ವಾಸ ಮೂಡಿಸಿದೆ’ ಎಂದು ವಿಶ್ಲೇಷಿಸಿದರು.
ಕೇಂದ್ರೀಯ ಅಬಕಾರಿ ಆಯುಕ್ತ (ಬೆಂಗಳೂರು) ಕಮಲ್ ಜ್ಯೋತಿ ಮಾತನಾಡಿ, ‘ಸುಧಾರಣೆಯತ್ತ ಒಲವು ಹೊಂದಿರುವ ಬಜೆಟ್ ಮಂಡಿಸಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸುಧಾರಣೆಯ ಭರವಸೆ ಇಟ್ಟುಕೊಳ್ಳಬಹುದು’ ಎಂದರು. ‘ಕೇವಲ ಅಭಿವೃದ್ಧಿ ಪಥದಲ್ಲಿ ಸಾಗಿದರೆ ಸಾಲದು. ಅಭಿವೃದ್ಧಿಯು ಹೆಚ್ಚು ಮಂದಿಗೆ ಉದ್ಯೋಗ ನೀಡುವಂತಿರಬೇಕು.
ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯಾಗಬೇಕು. ಆದರೆ, ಹೂಡಿಕೆಗೂ ಮಿತಿ ಇದೆ. ಹಾಗಾಗಿ ತೆರಿಗೆ ಮೂಲ ಹೆಚ್ಚಾಗಬೇಕು’ ಎಂದು ತಿಳಿಸಿದರು. ‘ಆರ್ಥಿಕ ಸ್ಥಿರತೆ ಸಾಧಿಸಬೇಕಾಗಿದ್ದು, ತೆರಿಗೆ ಸಂಗ್ರಹದಲ್ಲಿ ಮತ್ತಷ್ಟು ಸುಧಾರಣೆ ಆಗಬೇಕಿದೆ. ಅದಕ್ಕೆ ಪೂರಕ ತಂತ್ರಜ್ಞಾನದ ಅಗತ್ಯವಿದೆ’ ಎಂದರು. ಅಸೋಚಾಮ್ ದಕ್ಷಿಣ ವಲಯ ಪ್ರಾದೇಶಿಕ ಮಂಡಳಿಯ ಸದಸ್ಯ ಎಸ್.ಬಾಬು ಹಾಗೂ ಪ್ರೈಸ್ವಾಟರ್ಹೌಸ್ನ ಅಬ್ದುಲ್ ಮಜೀದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.