ಮೈಸೂರು: ‘ಕಡ್ಡಾಯ ಶಿಕ್ಷಣ ಹಕ್ಕು (ಆರ್ಟಿಇ) ಕಾಯ್ದೆ ಉಲ್ಲಂಘಿಸುವ ಖಾಸಗಿ ಶಾಲೆಗಳು ದೇಶದ್ರೋಹಿಗಳು. ಸಚಿವ ಎಚ್.ಆಂಜನೇಯ ಈಚೆಗೆ ನೀಡಿರುವ ಹೇಳಿಕೆಯಲ್ಲಿ ಕಿಂಚಿತ್ತೂ ತಪ್ಪಿಲ್ಲ. ಬಳಸಿದ ಭಾಷೆ ಸಭ್ಯವಾಗಿರಬೇಕಿತ್ತು ಅಷ್ಟೆ’ ಎಂದು ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಸಮರ್ಥಿಸಿದರು.
ನಗರದ ಕಲಾಮಂದಿರದಲ್ಲಿ ಮಂಗಳವಾರ ನಡೆದ ‘ನಾವು ಪೌರರು ಮಹಾಪೌರರು’ ಪೌರಕಾರ್ಮಿಕರ ಮಕ್ಕಳ ಸಾಂಸ್ಕೃತಿಕ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ಬಡ ಮಕ್ಕಳಿಗಾಗಿ ಮೀಸಲಿಟ್ಟಿರುವ ಸಾವಿರಾರು ಸೀಟುಗಳನ್ನು ನೀಡಲು ಖಾಸಗಿ ಶಾಲೆಗಳು ಹಿಂದೇಟು ಹಾಕುತ್ತಿವೆ. ಈ ಬಗ್ಗೆ ಮಾತನಾಡುವ ಹಕ್ಕು ಆಂಜನೇಯ ಅವರಿಗಿದೆ. ಅವರ ಆಕ್ರೋಶದಲ್ಲಿ ಅರ್ಥವಿದ್ದು, ಅದು ಕ್ರಾಂತಿಗೆ ಮುನ್ನುಡಿ ಬರೆಯುವಂಥದ್ದು’ ಎಂದರು.