ರಾಘವೇಂದ್ರ ಸ್ವಾಮಿಗಳು ದೇವರಲ್ಲವೆಂಬ ನನ್ನ ಹೇಳಿಕೆಯನ್ನು ಆಕ್ಷೇಪಿಸಿ ವಾಚಕರೊಬ್ಬರು ‘ಸರ್ವಾಂತರ್ಯಾಮಿಯಾದ ದೇವರು ರಾಘವೇಂದ್ರ ಸ್ವಾಮಿಗಳಲ್ಲಿ ಇಲ್ಲವೇ?’ (ವಾ.ವಾ., ಜುಲೈ 25) ಎಂದು ಪ್ರಶ್ನಿಸಿದ್ದಾರೆ. ರಾಘವೇಂದ್ರ ಸ್ವಾಮಿಗಳಲ್ಲಿ ದೇವರು ಖಂಡಿತವಾಗಿಯೂ ಇದ್ದಾರೆ. ಆದರೆ ರಾಘವೇಂದ್ರ ಸ್ವಾಮಿಗಳೇ ದೇವರೆಂದು ಹೇಳಬಾರದು. ಕಲ್ಲಿನಲ್ಲಿ ದೇವರಿದ್ದಾರೆ. ಆದರೆ ಕಲ್ಲೇ ದೇವರೆಂದು ಹೇಳಬಹುದೇ?
ಈ ವ್ಯತ್ಯಾಸ ಅರ್ಥ ಮಾಡಿಕೊಂಡರೆ ನನ್ನ ಹೇಳಿಕೆಯಿಂದ ಯಾವುದೇ ಗೊಂದಲ ಉಂಟಾಗಲಾರದು. ರಾಘವೇಂದ್ರ ಗುರುಗಳಲ್ಲಿ ದೇವರಿದ್ದಾರೆ. ಅವರು ದೇವರ ಮಹಾನ್ ಭಕ್ತರು. ಮಹಾಗುರುಗಳು. ಅವರನ್ನೂ ದೇವರಂತೆ ಪೂಜಿಸಿರಿ. ಆದರೆ ಅವರೇ ಸರ್ವೋತ್ತಮನಾದ ದೇವರೆಂದು ಭಾವಿಸಬಾರದು. ಅದರಂತೆ ಸಾಯಿಬಾಬಾರವರು ದೊಡ್ಡ ಸಂತರು. ಅವರ ಭಕ್ತರು ಅವರನ್ನು ದೇವರಂತೆ ಪೂಜಿಸಬಹುದು. ಆದರೆ ಅವರೇ ದೇವರೆಂದು ಭಾವಿಸಬಾರದು. ನನ್ನ ಹೇಳಿಕೆಯನ್ನು ಜನರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿ ಅಪೇಕ್ಷಿಸುತ್ತೇನೆ.