ನವದಹೆಲಿ (ಪಿಟಿಐ): ಕಾಶ್ಮೀರ ಪಾಕಿಸ್ತಾನದ ‘ರಕ್ತನಾಳ’ ಎಂದು ಪಾಕ್ ಸೇನೆ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಒಕ್ಕೋರಲಿನಿಂದ ಖಂಡಿಸಿವೆ.
‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗ’ ಎಂದು ಎರಡೂ ಪಕ್ಷಗಳು ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿವೆ. ‘ಪಾಕ್ ಕಾಶ್ಮೀರದ ದೊಡ್ಡ ಭೂಪ್ರದೇಶವನ್ನು ಅತಿಕ್ರಮಿಸಿಕೊಂಡಿರುವುದು ನಿಜವಾದ ಸಮಸ್ಯೆ’ ಎಂದು ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ.
‘ಪಾಕ್ ಸೇನೆ ಮುಖ್ಯಸ್ಥ ಈ ರೀತಿಯ ಅಲಂಕಾರಿಕ ಹೇಳಿಕೆ ನೀಡಿರುವುದು ಸ್ವೀಕಾರ್ಹವಲ್ಲ. ದೇಶದ ಪ್ರಮುಖ ವಿಚಾರಗಳನ್ನು ಹೇಗೆ ನಿರ್ವಹಿಸಬೇಕು ಎಂಬುದು ಭಾರತ ಸರ್ಕಾರಕ್ಕೆ ಗೊತ್ತು. ಇಂತಹ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಖಂಡಿತ ಸರಿಯಿಲ್ಲ’ ಎಂದು ಬಿಜೆಪಿ ನಾಯಕ ರವಿಶಂಕರ ಪ್ರಸಾದ್ ಹೇಳಿದ್ದಾರೆ.