ಹುಬ್ಬಳ್ಳಿ: ‘ಬೆಂಗಳೂರಿನಲ್ಲಿ ‘ಕಿಸ್ ಆಫ್ ಲವ್’ ಪ್ರತಿಭಟನೆಗೆ ಶ್ರೀರಾಮ ಸೇನೆ ಅವಕಾಶ ಕೊಡುವುದಿಲ್ಲ. ಅಸಂಬದ್ಧ ಪ್ರತಿಭಟನೆ ತಡೆಯುವ ವೇಳೆ ಹಿಂಸಾಚಾರ ನಡೆದರೆ ಸರ್ಕಾರವೇ ಅದರ ಹೊಣೆ ಹೊರಬೇಕಾಗುತ್ತದೆ. ಅಷ್ಟರ ಮೇಲೂ ಕಾರ್ಯಕ್ರಮ ನಡೆಸುವುದು ಸಂಘಟಕರಿಗೆ ಬಿಟ್ಟದ್ದು’ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಭಾನುವಾರ ಇಲ್ಲಿ ಎಚ್ಚರಿಸಿದರು.
‘2009ರ ಮಂಗಳೂರು ಪಬ್ ದಾಳಿ ನಮ್ಮಿಂದಾದ ತಪ್ಪು. ಅದನ್ನು ಒಪ್ಪಿಕೊಳ್ಳುತ್ತೇನೆ. ನೈತಿಕ ಪೊಲೀಸ್ಗಿರಿ ವಿರುದ್ಧ ಅವರು ನಡೆಸು ತ್ತಿರುವ ಪ್ರತಿಭಟನೆಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ, ಅದನ್ನು ವಿರೋಧಿಸುತ್ತಿರುವ ರೀತಿ ಸರಿಯಲ್ಲ. ‘ಕಿಸ್ ಆಫ್ ಲವ್’ ಆಚರಣೆ ನಮ್ಮ ಸಂಸ್ಕೃತಿಗೆ ವಿರುದ್ಧ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಐವರಿಗೆ ನೋಟಿಸ್: ಬೆಂಗಳೂರಿನಲ್ಲಿ‘ಕಿಸ್ ಆಫ್ ಲವ್’ ಪ್ರತಿಭಟನೆ ತಡೆಯಬೇಕು ಎಂದು ಒತ್ತಾಯಿಸಿ ರಾಜ್ಯದ ಮುಖ್ಯ ಕಾರ್ಯದರ್ಶಿ, ಗೃಹ, ಕಾನೂನು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಸಂಸ್ಕೃತಿ ಸಚಿವರಿಗೆ ಹಾಗೂ ಹೆಚ್ಚುವರಿ ಪೊಲೀಸ್ ನಿರ್ದೇಶಕರಿಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ, ನ್ಯಾಯಾಲಯದಲ್ಲಿ ಈ ಬಗ್ಗೆ ಸಾರ್ವ ಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು’ ಎಂದೂ ಹೇಳಿದರು. ‘ಕಾಂಗ್ರೆಸ್ನ ಉಮಾಶ್ರೀ, ಮೋಟಮ್ಮ ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ‘ಕಿಸ್ ಆಫ್ ಲವ್’ ವಿರೋಧಿಸಿದ್ದಾರೆ. ಇಂತಹ ಕಾರ್ಯಕ್ರಮ ಆಯೋಜಿಸಿ ಪರೋಕ್ಷವಾಗಿ ಮಹಿಳೆಯರ ವಿರುದ್ಧದ ದೌರ್ಜನ್ಯವನ್ನು ಪ್ರೋತ್ಸಾಹಿಸಿದಂತಾಗುತ್ತದೆ’ ಎಂದು ಹೇಳಿದರು.
ಪ್ರೀತಿಯ ಮುತ್ತು: ಚರ್ಚೆ ಅನಗತ್ಯ– ದೇವೇಗೌಡ
ಪ್ರಜಾವಾಣಿ ವಾರ್ತೆ
ಮದ್ದೂರು: ‘ನೈತಿಕ ಪೊಲೀಸ್ಗಿರಿಯನ್ನು ವಿರೋಧಿಸಿ ಆಯೋಜಿಸಲಾದ ‘ಪ್ರೀತಿಯ ಮುತ್ತು’ ಕಾರ್ಯಕ್ರಮ ಕುರಿತು ಚರ್ಚೆ ಅನಗತ್ಯ’ ಎಂದು ಸಂಸದ ಎಚ್.ಡಿ. ದೇವೇಗೌಡ ತಿಳಿಸಿದರು.
ಇಲ್ಲಿಗೆ ಸಮೀಪದ ದೇಶಹಳ್ಳಿಯಲ್ಲಿ ಭಾನುವಾರ ಅವರು ಸುದ್ದಿಗಾ ರರೊಂದಿಗೆ ಮಾತ ನಾಡಿದರು. ಪ್ರಶ್ನೆ ಕೇಳುತ್ತಿ ದ್ದಂತೆ ತುಸು ಮುಜು ಗರಕ್ಕೆ ಒಳಗಾದ ದೇವೇಗೌಡರು, ಇದು ಚರ್ಚೆಗೆ ಯೋಗ್ಯವಾದ ವಿಚಾರವಲ್ಲ ಎಂದು ಸುಮ್ಮನಾದರು.
‘ಶೃಂಗಾರ ಬಚ್ಚಿಡುವಂಥದ್ದು, ಬಿಚ್ಚಿಡುವಂಥದ್ದಲ್ಲ’: ‘ಶೃಂಗಾರ ಬಚ್ಚಿಡುವಂಥದ್ದು, ಬಿಚ್ಚಿಡುವಂಥದ್ದಲ್ಲ’ ಎಂದು ಹಿರಿಯ ಸಾಹಿತಿ ಪ್ರೊ.ದೊಡ್ಡರಂಗೇಗೌಡ ಹೇಳಿದರು.
ಇಲ್ಲಿಗೆ ಸಮೀಪದ ದೇಶಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೈತಿಕ ಪೊಲೀಸ್ಗಿರಿಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ಆಯೋ ಜಿಸಲಾದ ‘ಪ್ರೀತಿಯ ಮುತ್ತು’ ಕಾರ್ಯಕ್ರಮ ನಮ್ಮ ಸಂಸ್ಕೃತಿಗೆ ನಾವೇ ಮಾಡಿಕೊಂಡ ಅಪಮಾನ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
‘ಮುತ್ತಿನ ಪ್ರೇಮ ಕಾರ್ಯಕ್ರಮ ನಮ್ಮ ನೆಲಕ್ಕೆ ಒಗ್ಗುವಂಥದ್ದಲ್ಲ. ಇಂತಹ ಕಾರ್ಯಕ್ರಮಗಳನ್ನು ಎಲ್ಲರೂ ಸಾರ್ವತ್ರಿಕವಾಗಿ ವಿರೋಧಿಸಬೇಕು. ಇಂತಹ ಕಾರ್ಯಕ್ರಮಗಳಿಗೆ ಸರ್ಕಾರ ಅವಕಾಶ ನೀಡಬಾರದು. ಶೃಂಗಾರ ನಾಲ್ಕು ಗೋಡೆಗಳ ಮಧ್ಯದಲ್ಲಿರಬೇಕೇ ಹೊರತು ಬಹಿರಂಗವಾಗಬಾರದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.