ಪಿರಿಯಾಪಟ್ಟಣ: ಗಿರಿಜನರ ವಿಶಿಷ್ಟ ಸಂಪ್ರದಾಯವಾದ ‘ಕುಂಡೆ’ ಹಬ್ಬದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಾಲ್ಲೂಕಿನ ಮುತ್ತೂರು ಗಿರಿಜನ ಹಾಡಿಯ ಯುವಕರು ವಿಚಿತ್ರ ವೇಷಭೂಷಣ ಧರಿಸಿ ಬುಧವಾರ ಮೆರವಣಿಗೆ ನಡೆಸಿದರು.
ತಾಲ್ಲೂಕಿನ ಗಿರಿಜನರಲ್ಲಿ ‘ಬೈಗುಳದ ಹಬ್ಬ’ವೆಂದೇ ಜನಜನಿತವಾಗಿರುವ ‘ಕುಂಡೆ’ ಹಬ್ಬದ ಅಂಗವಾಗಿ ಗಿರಿಜನ ಹಾಡಿಯ ಇಪ್ಪತ್ತಕ್ಕೂ ಹೆಚ್ಚು ಯುವಕ, ಯುವತಿಯರು ಭೂತದ ವೇಷ, ಕ್ಯಾಬರೆ ನರ್ತಕಿ ಉಡುಪು, ಆಫ್ರಿಕಾ ಬುಡಕಟ್ಟು ವೇಷ, ಮಾಟಗಾರ, ಆಧುನಿಕ ಮಹಿಳೆಯ ಪೋಷಾಕು ಧರಿಸಿ ನರ್ತಿಸುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಕೆಟ್ಟ ಬೈಗುಳಗಳನ್ನು ರಾಗಬದ್ಧವಾಗಿ ಹಾಡುತ್ತಾ, ಪ್ಲಾಸ್ಟಿಕ್ ಡ್ರಮ್, ಸೋರೆಕಾಯಿ ಬುರುಡೆ, ತಗಡಿನ ಡಬ್ಬಿ ಇತರ ಅನುಪಯುಕ್ತ ವಸ್ತುಗಳನ್ನೇ ವಾದ್ಯಗಳನ್ನಾಗಿ ಮಾಡಿ ಅದನ್ನು ತಾಳಬದ್ಧವಾಗಿ ನುಡಿಸಿ, ಕುಣಿದು ಕುಪ್ಪಳಿಸಿದರು. ಅಂಗಡಿಗಳಿಂದ ಚಂದಾ ವಸೂಲಿ ಮಾಡುವಾಗ ಹಣ ಕೊಡದಿದ್ದರೆ ಬೈಗುಳಗಳನ್ನು ಸುರಿಸುತ್ತಿದ್ದುದರಿಂದ ವ್ಯಾಪಾರಸ್ಥರು ಪುಡಿಗಾಸು ನೀಡಿ, ಸಾಗ ಹಾಕುತ್ತಿದ್ದರು.