ಬೆಂಗಳೂರು: ‘ಅಂಬೇಡ್ಕರ್ ಮತ್ತು ಗಾಂಧೀಜಿ ಜತೆಗೂಡಿ ಕೆಲಸ ಮಾಡಿದ್ದರೆ ದೇಶದ ಚಿತ್ರಣವೇ ಬದಲಾಗುತ್ತಿತ್ತು’ ಎಂದು ಲೇಖಕ ಪ್ರೊ.ಜಿ.ಕೆ. ಗೋವಿಂದರಾವ್ ಅಭಿಪ್ರಾಯಪಟ್ಟರು.
66ನೇ ಸಂವಿಧಾನ ದಿನಾಚರಣೆ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಸಂವಿಧಾನದ ಆಶಯಗಳು ಮತ್ತು ಅನುಷ್ಠಾನದಲ್ಲಿನ ವೈಫಲ್ಯಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ಕಾಂಗ್ರೆಸ್ ಹಾಗೂ ಗಾಂಧೀಜಿ ಅವರನ್ನು ಅಂಬೇಡ್ಕರ್ ವಿರೋಧಿಸಿದ್ದರು. ಅವರು ಎಲ್ಲ ವರ್ಗಗಳನ್ನು ಸಮಾನ ದೃಷ್ಟಿಯಿಂದ ನೋಡಿದ್ದರು. ಅವರು ಉತ್ತಮ ಮನಸ್ಸು ಹಾಗೂ ಬುದ್ಧಿ ಇರುವ ಮೇಧಾವಿ. ಗಾಂಧೀಜಿ ಅವರಿಗೆ ಒಳ್ಳೆಯ ಮನಸ್ಸಿತ್ತು. ಆದರೆ, ದೂರದೃಷ್ಟಿ ಇರಲಿಲ್ಲ’ ಎಂದು ಟೀಕಿಸಿದರು.
ದೇಶದಲ್ಲಿ ಎಲ್ಲಿಯವರೆಗೆ ದಲಿತರು ಸಮಾನತೆಯ ಭಾವ ಅನುಭವಿಸುವುದಿಲ್ಲವೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎಂದು ಪ್ರತಿಪಾದಿಸಿದರು.
ಪ್ರಕೃತಿ ಯಾರನ್ನೂ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ಸೃಷ್ಟಿಸಿಲ್ಲ. ಮನುಷ್ಯರನ್ನಾಗಿ ಸೃಷ್ಟಿಸಿದೆ. ಆದರೆ, ಮೇಲ್ವರ್ಗದವರು ಶಾಸ್ತ್ರ, ಸಂಪ್ರದಾಯಗಳ ಮೂಲಕ ಕೆಳವರ್ಗದವರನ್ನು ಇನ್ನೂ ಕೆಳಗೆ ತಳ್ಳುತ್ತಿದ್ದಾರೆ. ಅದನ್ನು ವಿರೋಧಿಸಲು ಎಲ್ಲಿಯವರೆಗೆ ಕ್ರಿಯಾಶೀಲ ಸಿಟ್ಟು ಬರುವುದಿಲ್ಲವೋ ಅಲ್ಲಿಯವರೆಗೆ ದೇಶ ಅಭಿವೃದ್ಧಿಯಾಗುವುದಿಲ್ಲ ಎಂದರು.
ಹೈಕೋರ್ಟ್ ವಕೀಲ ಬಿ.ಟಿ.ವೆಂಕಟೇಶ್ ಮಾತನಾಡಿ, ಇದುವರೆಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ನೇಮಕವಾಗಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದವರು ಮೇಲ್ಜಾತಿಯವರು. ಹೀಗಿರುವಾಗ ಸಾಮಾಜಿಕ ನ್ಯಾಯವನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದರು.