ರಾಮನಗರ: ಸಮ ಸಮಾಜದ ಆಶಯಗಳನ್ನು ಮಕ್ಕಳ ಮನಸ್ಸಿಗೆ ಮುಟ್ಟಿಸುವ ಆಶಯ.... ಮತದಾನದ ಹಕ್ಕಿನ ಅರಿವು ಮೂಡಿಸಿ ಸದೃಢ ನಾಡು ಕಟ್ಟುವ ಉತ್ಸಾಹ... ಜನಪದ ಕಲಾ ನೃತ್ಯಗಳ ವೈಭವ... ಚಿಣ್ಣರ ಚಿಲಿಪಿಲಿ ಗಾನ ಹಾಗೂ ಅವರಲ್ಲಿ ಹೊಸ ಹುರುಪಿನ ಒನಪು... ಸಡಗರ ಸಂಭ್ರಮದ ಸಮಾಗಮ...
ಅಕ್ಷರ ಧಮ್ಮ ಟ್ರಸ್ಟ್, ಮಾಯ್ಕಾರ ರಂಗತಂಡ, ಕರ್ನಾಟಕ ಜಾನಪದ ಪರಿಷತ್ತಿನ ಸಹಯೋಗದೊಂದಿಗೆ ಜಾನಪದ ಲೋಕದ ಬಯಲು ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೇಸಿಗೆ ಶಿಬಿರದಲ್ಲಿ ಕಂಡು ಬಂದ ರಮಣೀಯ ದೃಶ್ಯಗಳಿವು.
‘ಗ್ರಾಮ ಭಾರತದೊಳಗೆ ಚಿಣ್ಣರ ಮೇಳ' ಎಂಬ ಪರಿಕಲ್ಪನೆಯೊಂದಿಗೆ ಮಕ್ಕಳ ವಿಶೇಷ ದೇಸಿ ಬೇಸಿಗೆ ಶಿಬಿರಕ್ಕೆ ಚಾಲನೆ ದೊರೆತಾಗ ಅಲ್ಲಿ ಹಬ್ಬದ ಸಂಭ್ರಮವಿತ್ತು, ಅಲ್ಲಿದ್ದ ಮಕ್ಕಳ ಮನದಲ್ಲಿ ಉತ್ಸಾಹ ಪುಟಿದೇಳುತ್ತಿತ್ತು. ಬೇಸಿ-ಗೆಯ ಸೂರ್ಯ ಮರೆಯಾಗಿ ತಂಪಿನ ವಾತಾವರಣ ಪಸರಿಸುತ್ತಿದ್ದಂತೆ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿತ್ತು.
ಶಿಬಿರ ಉದ್ಘಾಟಿಸಿದ ಚಿತ್ರನಟ ಅರುಣ್ ಸಾಗರ್ ಮಾತನಾಡಿ, ‘ಮುಖವಾಡವಿಲ್ಲದೆ ಬದುಕುವ ಕಲೆ ರೂಪಿಸಿಕೊಂಡಿರುವ ಮಕ್ಕಳ ಜೊತೆ ಹೆಚ್ಚಿನ ಸಮಯ ಮೀಸಲಿಡುವುದರಿಂದ ಪೋಷಕರು ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುವುದು. ಮಕ್ಕಳ ಜೊತೆ ಮಕ್ಕಳಾಗಿ ಆಡಿ ನಲಿದು, ಕುಣಿಯುವುದರಿಂದ ದೈಹಿಕ, ಮಾನಸಿಕ ಶಕ್ತಿ ದೊರೆಯುವುದು’ ಎಂದು ಅವರು ತಿಳಿಸಿದರು.
ಅಕ್ಷರ ಧಮ್ಮ ಟ್ರಸ್ಟ್ನ ಅಧ್ಯಕ್ಷ ಎಚ್. ಮೋಹನ್ ಕುಮಾರ್, ಪರಿಷತ್ತಿನ ವ್ಯವಸ್ಥಾಪಕ ಟ್ರಸ್ಟಿ ಇಂದಿರಾ ಬಾಲಕೃಷ್ಣ, ಸಾಹಿತಿ ಬಿ. ಪಾರ್ವತೀಶ್, ಅಕ್ಷರಧಮ್ಮ ಟ್ರಸ್ಟ್ ನಿರ್ದೇಶಕ ಶಿವಣ್ಣ ಮಾತನಾಡಿದರು. ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞ ಡಾ.ಸಿ.ಜಿ. ಲಕ್ಷ್ಮೀಪತಿ
ಮಾತನಾಡಿದರು.