ಬೆಟದೂರ: ‘ನನ್ನ ಗಂಡನೂ ಸೈನಿಕನಾಗಿದ್ದ. ಅವನು ಸತ್ತಾಗಲೂ ನೀವೆಲ್ಲ ಮಾಧ್ಯಮಗಳ ಎದುರು ಪರಿಹಾರ ಘೋಷಣೆ ಮಾಡಿದಿರಿ. ಆದರೆ, ಯಾವ ಹಣಾನೂ ನನಗೆ ಸಿಗಲಿಲ್ಲ. ನನ್ನಂತೆ ಮಹಾದೇವಿ ಸ್ಥಿತಿನೂ ಆಗಬಾರದು. ಅವರಿಗಾದರೂ ಸರಿಯಾಗಿ ಪರಿಹಾರದ ಹಣ ತಲುಪುವಂತೆ ವ್ಯವಸ್ಥೆ ಮಾಡಿ...’
ಯೋಧ ಹನುಮಂತಪ್ಪ ಅವರ ಬೆಟದೂರಿನ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸೈನಿಕನ ಪತ್ನಿ ಜಯಶ್ರೀ ಮಲ್ಲಪ್ಪ ಚನ್ನಳ್ಳಿ ಈ ರೀತಿ ವಿನಂತಿಸಿದರು. ಗದಗ ತಾಲ್ಲೂಕಿನ ಹಳ್ಳಿಗುಡಿ ಗ್ರಾಮದಿಂದ ಬಂದಿದ್ದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಕೆ. ಪಾಟೀಲ ಅವರನ್ನು ಕಾಣುತ್ತಲೇ ಉದ್ವೇಗದಿಂದ ಮಾತನಾಡತೊಡಗಿದರು.
‘ಬಿಎಸ್ಎಫ್ನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಗಂಡ ಮಲ್ಲಪ್ಪ ಚನ್ನಳ್ಳಿ 2014ರಲ್ಲಿ ಮರಣ ಹೊಂದಿದರು.ಆಗ, ಕೇಂದ್ರ ಸರ್ಕಾರ ಮಾತ್ರ ಪರಿಹಾರ ನೀಡಿತು. ರಾಜ್ಯ ಸರ್ಕಾರದಿಂದ ಯಾವ ಹಣವನ್ನೂ ನೀಡಲಿಲ್ಲ. ನನ್ನಂತೆ ಮಹಾದೇವಿಗೂ ಆಗಬಾರದು’ ಎಂದರು.
‘ಈಗಾಗಲೇ ಮಹಾದೇವಿಗೆ ₹25 ಲಕ್ಷದ ಪರಿಹಾರದ ಚೆಕ್ ನೀಡಲಾಗಿದೆ. ನೀವೂ ಮನವಿ ಕೊಡಿ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.