ಅಹಮದಾಬಾದ್: ಯುಪಿಎ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತವಲಯದಲ್ಲಿ ಪ್ರಮುಖರೆನ್ನೆಸಿಕೊಂಡ ಕೆಲವರಲ್ಲಿ ಅಹಮ್ಮದ್ ಪಟೇಲ್ ಕೂಡ ಒಬ್ಬರು. ಇಷ್ಟು ವರ್ಷಗಳ ಕಾಲ ನೇಪಥ್ಯದಲ್ಲಿದ್ದು ಕೆಲಸ ಮಾಡುತ್ತಿದ್ದ ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿಯೂ ಆದ 64 ವರ್ಷದ ಪಟೇಲ್ ಈಗ ಮುಂಚೂಣಿಗೆ ಬಂದು ಗುಜರಾತ್ನಲ್ಲಿ ಕಾಂಗ್ರೆಸ್ನ ಚುನಾವಣಾ ಪ್ರಚಾರ ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ಹೇಳಿ ಕೇಳಿ ಗುಜರಾತ್ನಲ್ಲಿ 15 ವರ್ಷಗಳಿಂದ ಕಾಂಗ್ರೆಸ್ ಇನ್ನಿಲ್ಲದಂತೆ ನೆಲಕಚ್ಚಿದೆ. ಹೆಚ್ಚುಕಡಿಮೆ ಒಂದು ದಶಕದಿಂದ ಮಾಧ್ಯಮಗಳಿಂದ ದೂರವೇ ಇದ್ದ ಪಟೇಲ್ ಈಗ ಸ್ವಕ್ಷೇತ್ರ ಭರೂಚ್ನಲ್ಲಿ ಪ್ರಚಾರ ನಿರತರಾಗಿದ್ದು, ನರೇಂದ್ರ ಮೋದಿ ಅವರ ಪ್ರಧಾನಿ ಆಸೆಗೆ ತಡೆಯೊಡ್ಡುವ ಕಾರ್ಯತಂತ್ರಗಳನ್ನೂ ಹೆಣೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.
*ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲಾ ಕಾಂಗ್ರೆಸ್ಗೆ ವಿರುದ್ಧವಾಗಿವೆ. ಗುಜರಾತ್ನಲ್ಲಂತೂ ನಿಮ್ಮ ಪಕ್ಷಕ್ಕೆ ನೆಲೆಯೇ ಇಲ್ಲ ಎನ್ನಬಹುದು. ಇಂತಹ ಸ್ಥಿತಿಯಲ್ಲಿ ನೀವು ಹೇಗೆ ಪ್ರಭಾವ ಬೀರುತ್ತೀರಿ?
ಉ: ನಾವು ವಾಸ್ತವ ಸಂಗತಿಗಳ ಮೇಲೆ ಪ್ರಚಾರ ನಡೆಸುತ್ತೇವೆಯೇ ಹೊರತು ಭ್ರಮಾತ್ಮಕ ಸತ್ಯಗಳಿಂದ ಜನರನ್ನು ಮರುಳು ಮಾಡುವುದಿಲ್ಲ. ಪಕ್ಷದ ನಾಯಕರು ಕೂಡ ಯುಪಿಎ ಸರ್ಕಾರ ಮಾಡಿದ ಕೆಲಸಗಳಾವುವು ಎಂಬುದನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ.
*ಬಿಜೆಪಿ ಹಾಗೂ ಅದರ ಪ್ರಧಾನಿ ಅಭ್ಯರ್ಥಿ ಬಳಸುತ್ತಿರುವ ತಂತ್ರಜ್ಞಾನ– ಪ್ರಚಾರ ವೈಭವ ನಿಮ್ಮ ಪಕ್ಷವನ್ನು ಕಂಗೆಡಿಸಿಲ್ಲವೇ?
ಉ: ಹಾಗೇನೂ ಇಲ್ಲ. ಸುಳ್ಳನ್ನು ಕೂಗಿ ಕೂಗಿ ಹೇಳಿದರೆ ಅದು ಸತ್ಯವಾಗದು ಎಂಬುದು ಜನತೆಗೆ ಗೊತ್ತು. ‘ಗುಜರಾತ್ ಮಾದರಿ’ಯಿಂದ ಏನೂ ಪ್ರಯೋಜನವಿಲ್ಲ ಎಂಬುದೂ ಅವರಿಗೆ ಮನವರಿಕೆಯಾಗಿದೆ. ಮೋದಿ ಅವರಿಂದ ರಾಜ್ಯ ಮಟ್ಟದಲ್ಲಿ ಆಗಿರುವ ಹಾನಿಯನ್ನು ಕಂಡಿರುವ ಜನ ಈಗ ರಾಷ್ಟ್ರ ಮಟ್ಟದಲ್ಲಿ ಅಂತಹ ಹಾನಿ ಆಗಬಾರದು ಎಂದೇ ಬಯಸುತ್ತಿದ್ದಾರೆ.
*ಗುಜರಾತ್ನ ನಾಯಕರೊಬ್ಬರು ಪ್ರಧಾನಿ ಅಭ್ಯರ್ಥಿಯಾಗಿರುವುದು ಆ ಪಕ್ಷಕ್ಕೆ ರಾಜ್ಯದಲ್ಲಿ ಅನುಕೂಲ ಮಾಡಿಕೊಡುತ್ತದೆಯೇ?
ಉ: ರಾಷ್ಟ್ರವನ್ನು ಮುನ್ನಡೆಸಲು ಯಾರು ಸೂಕ್ತ ಎಂಬುದು ರಾಜ್ಯದ ಜನತೆಗೆ ಚೆನ್ನಾಗಿಯೇ ಗೊತ್ತು. ಬಿಜೆಪಿ ಜನರ ಭಾವನೆಗಳನ್ನು ಕೆರಳಿಸಿ ಲಾಭ ಮಾಡಿಕೊಳ್ಳಲು ಹವಣಿಸುತ್ತಿದೆ. ಆದರೆ ಅದು ಫಲ ನೀಡದು. ಕಾಂಗ್ರೆಸ್ ಪಕ್ಷವು 2009ರ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಕನಿಷ್ಠ ಒಂದು ಸ್ಥಾನವನ್ನಾದರೂ ಹೆಚ್ಚು ಪಡೆಯಲಿದೆ.
*ನಿಮ್ಮ ಪಕ್ಷದಲ್ಲಿ ಯುವಕರಿಗೆ ಆದ್ಯತೆ ನೀಡಿರುವುದರಿಂದ ಏನಾದರೂ ಅನುಕೂಲವಾಗುತ್ತದೆಯೇ?
ಉ: ಹೌದು. ಯುವ ನಾಯಕರು ಚುನಾವಣಾ ತಯಾರಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಟಿಕೆಟ್ ಹಂಚಿಕೆಯಲ್ಲೂ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಲಾಗಿದೆ. ಟಿಕೆಟ್ ನೀಡಿಕೆಯಲ್ಲಿ ಕೆಲವು ತಪ್ಪುಗಳಾಗಿದ್ದರೂ ಅದು ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರದು. ರಾಹುಲ್ ಗಾಂಧಿ ಅವರು ಅಭ್ಯರ್ಥಿಗಳ ಆಯ್ಕೆಗಾಗಿ ನಡೆಸಿದ ಪೂರ್ವಭಾವಿ ಚುನಾವಣಾ ಪದ್ಧತಿಯು ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಬಲ ತುಂಬಿದೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಜನತೆ ನಮ್ಮ ಪಕ್ಷವನ್ನು ಖಂಡಿತವಾಗಿಯೂ ಬೆಂಬಲಿಸುತ್ತಾರೆ.
*ಪ್ರಧಾನಿ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಅವರ ಪುಸ್ತಕದಿಂದ ಪಕ್ಷಕ್ಕೆ ನಷ್ಟವಾಗುತ್ತದೆಯೇ?
ಉ: ಇದರಿಂದ ಯಾವ ರೀತಿಯ ನಷ್ಟವೂ ಆಗದು. ಆ ಪುಸ್ತಕದಲ್ಲಿ (ಆ್ಯಕ್ಸಿಡೆಂಟಲ್ ಪಿಎಂ) ಸತ್ಯದ ಲವಲೇಶವೂ ಇಲ್ಲ. ಈ ಪುಸ್ತಕ ಬಿಡುಗಡೆ ಮಾಡಿರುವ ಸಂದರ್ಭದ ಬಗ್ಗೆಯೂ ಜನರಿಗೆ ಅನುಮಾನಗಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.